ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಸದಾ ಒಂದಲ್ಲ ಒಂದು ಕಾರಣಕ್ಕೆ ತಮ್ಮ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸುತ್ತಿರುತ್ತಾರೆ. ಇದೀಗ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುನಿಫಾರ್ಮ್ ಸಿವಿಲ್ ಕೋಡ್) ಜಾರಿಗೆ ಬಂದ ಬಗ್ಗೆ ಮಾತನಾಡಿದ್ದು ಇದೇ ವೇಳೆ ದೇಶಾದ್ಯಂತ ಮಾಂಸಾಹಾರವನ್ನು ಬ್ಯಾನ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅವರ ಹೇಳಿಕೆ ಈಗ ಸಾಕಷ್ಟು ಟೀಕೆಗಳನ್ನು ಗುರಿಯಾಗಿದೆ.
ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಬಗ್ಗೆ ಶತ್ರುಘ್ನ ಸಿನ್ಹಾಗೆ ಪ್ರಶ್ನೆ ಮಾಡಲಾಯಿತು. ಈ ವೇಳೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘UCCನ ಉತ್ತರಾಖಂಡದಲ್ಲಿ ಪ್ರಾಥಮಿಕ ಹಂತದಲ್ಲಿ ಜಾರಿಗೆ ತಂದಿದ್ದು ಖುಷಿ ಇದೆ. ಇದು ದೇಶದಾದ್ಯಂತ ಬರಬೇಕು ಎಂಬುದು ನನ್ನ ಆಗ್ರಹ’ ಎಂದಿದ್ದಾರೆ.
‘ಏಕರೂಪ ನಾಗರಿಕ ಸಂಹಿತೆಯಲ್ಲಿ ಹಲವು ಸೂಕ್ಷ್ಮ ವಿಚಾರ ಮತ್ತು ಲೋಪದೋಷಗಳಿವೆ. ಕೇವಲ ಗೋಮಾಂಸವಲ್ಲ, ಒಟ್ಟಾರೆಯಾಗಿ ಮಾಂಸಾಹಾರವನ್ನೇ ದೇಶದಲ್ಲಿ ನಿಷೇಧಿಸಬೇಕು ಎಂಬ ಕೂಗು ಕೇಳಿ ಬಂದಿದೆ. ಆದರೆ ಉತ್ತರ ಭಾರತದಲ್ಲಿ ಹೇರಬಹುದಾದ ನಿಯಮಗಳನ್ನು ಈಶಾನ್ಯ ರಾಜ್ಯಗಳಲ್ಲಿ ಹೇರಲು ಸಾಧ್ಯವಿಲ್ಲ. ಯುಸಿಸಿ ನಿಬಂಧನೆಗಳನ್ನು ರಚಿಸುವ ಮೊದಲು ಸರ್ವಪಕ್ಷ ಸಭೆ ನಡೆಸಬೇಕು’ ಎಂದು ಅವರು ಹೇಳಿದ್ದಾರೆ.
ಶತ್ರುಘ್ನ ಅವರ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ‘ಯುಸಿಸಿಯಲ್ಲಿ ಯಾವ ಆಹರ ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬುದನ್ನು ಹೇಳುತ್ತಾರಾ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ‘ಯುಸಿಸಿ ಆಹಾರ ಮತ್ತು ಅಭ್ಯಾಸಗಳ ಬಗ್ಗೆ ಇಲ್ಲ. ಇದು ಮದುವೆ ಮತ್ತು ಆಸ್ತಿಗಳ ಹಕ್ಕಿನ ಬಗ್ಗೆ ಇರುವ ಕಾಯ್ದೆ’ ಎಂದು ಕೆಲವರು ಹೇಳಿದ್ದಾರೆ.