ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಗೆ ಮೇಲಿಂದ ಮೇಲೆ ಬಿಗ್ ಶಾಕ್ ಎದುರಾಗುತ್ತಿದೆ. ಕಳೆದ ಕೆಲ ತಿಂಗಳಿನಿಂದ ಜೈಲಿನಲ್ಲೇ ಕಾಲ ಕಳೆಯುತ್ತಿರುವ ನಟಿ ಬಿಡುಗಡೆಗಾಗಿ ಎದುರು ನೋಡ್ತಿದ್ದಾರೆ. ಆದರೆ ನಟಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಸದ್ಯಕ್ಕಂತು ಬಿಡುಗಡೆ ಭಾಗ್ಯವಿಲ್ಲವಾಗಿದೆ. ಈ ಮಧ್ಯೆ ರನ್ಯಾ ರಾವ್ ಅಕ್ರಮ ಚಿನ್ನಾ ಸಾಗಣೆ ಪ್ರಕರಣಕ್ಕೆ ಆದಾಯ ತೆರಿಗೆ ಇಲಾಖೆ ಎಂಟ್ರಿ ಕೊಟ್ಟಿದ್ದು, ಮೂರು ದಿನಗಳ ಕಾಲ ನಟಿಯನ್ನು ವಿಚಾರಣೆ ಮಾಡಲು ಮುಂದಾಗಿದೆ.
ಬರೋಬ್ಬರಿ 14 ಕೆಜಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ವೇಳೆ ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ಅವರನ್ನು ಮಾಲು ಸಮೇತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಹಿಂದೆಯೂ ಹಲವು ಭಾರಿ ನಟಿ ವಿದೇಶಕ್ಕೆ ತೆರಳಿ ಚಿನ್ನ ತೆಗೆದುಕೊಂಡು ಬಂದಿದ್ದರು. ನಟಿ ರನ್ಯಾ ಅವರು ಐಪಿಎಸ್ ಅಧಿಕಾರಿಯ ಪುತ್ರಿಯಾಗಿದ್ದು ಇದನ್ನೆ ಬಳಸಿಕೊಂಡ ನಟಿ ಅಕ್ರಮ ಚಿನ್ನ ಕಳ್ಳ ಸಾಗಣೆಗೆ ಪೊಲೀಸ್ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡಿದ್ದು ತನಿಖೆ ವೇಳೆ ಬಯಲಾಗಿತ್ತು. ಆದರೆ ನಟಿಯ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ನಟಿಯ ಕಳ್ಳಾಟ ಬಯಲಾಗಿದೆ.
ಈಗ ಐಟಿ ಇಲಾಖೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಿಂದ ರನ್ಯಾ ವಿಚಾರಣೆಗೆ ಅನುಮತಿ ಪಡೆದಿದೆ. ಇಂದಿನಿಂದ (ಜೂನ್ 11) ಜೂನ್ 13ರವರೆಗೆ ವಿಚಾರಣೆ ನಡೆಯಲಿದೆ. ರನ್ಯಾ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಅಲ್ಲಿಯೇ ವಿಚಾರಣೆಗೆ ಒಳಗಾಗಲಿದ್ದಾರೆ.
ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ಗೆ ಸಂಬಂಧಿಸಿದಂತೆ 49 ಕೆಜಿ ಚಿನ್ನ ಬೆಂಗಳೂರಿಗೆ ಕಳ್ಳಸಾಗಣೆ ಆಗಿದೆ. ಚಿನ್ನ ಕಳ್ಳಸಾಗಣೆ ಮಾಡಲು ಹವಾಲ ಮೂಲಕ ಹಣದ ವಹಿವಾಟು ಆಗಿದೆ ಎಂದು ಪ್ರಕರಣದ ಮೂರನೇ ಆರೋಪಿ ಸಾಹಿಲ್ ಜೈನ್ ಇತ್ತೀಚೆಗೆ ವಿಚಾರಣೆ ವೇಳೆ ತಿಳಿಸಿದ್ದರು.
ಈ ಮೊದಲು ನಟಿ ರಮ್ಯಾಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿತ್ತು. ಆದರೆ, ಆದರೆ ರನ್ಯಾ ರಾವ್ ಜೈಲಿನಿಂದ ಬಿಡುಗಡೆ ಆಗಿಲ್ಲ. ರನ್ಯಾ ರಾವ್ ಕೇಸ್ ನಲ್ಲಿ ಅಂತರರಾಷ್ಟ್ರೀಯ ಲಿಂಕ್ ಗಳು ಇದೆ. ಕಸ್ಟಮ್ಸ್ ನಿಯಮ ಉಲ್ಲಂಘನೆಯನ್ನು ಮಾಡಲಾಗಿದೆ. ಹೊರಬಂದಲ್ಲಿ ಸಾಕ್ಷಿ ನಾಶ ಮತ್ತು ಮಿಸ್ ಲೀಡ್ ಮಾಡುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ನಟಿಯ ಜಾಮೀನನ್ನು ಹಿಂಪಡೆಯಲಾಗಿದೆ.