ಬಾಲಿವುಡ್ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬಾಂದ್ರಾದಲ್ಲಿರುವ ರೆಸ್ಟೋರೆಂಟ್ ಅನ್ನು ಮುಚ್ಚಲಿದ್ದಾರೆ ಎಂದು ಸುದ್ದಿ ಕೇಳಿ ಬಂದಿದೆ. ಆರ್ಥಿಕ ಸಮಸ್ಯೆಯಿಂದಾಗಿ ರೆಸ್ಟೋರೆಂಟ್ ಕ್ಲೋಸ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಇದೀಗ ನಟಿ ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್ ಕ್ಲೋಸ್ ಮಾಡುತ್ತಿರುವುದರ ಹಿಂದಿನ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ.
ಶಿಲ್ಪಾ ರೆಸ್ಟೋರೆಂಟ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದು, ಪ್ರಸ್ತುತ ರೆಸ್ಟೋರೆಂಟ್ ಅನ್ನು ಮುಚ್ಚುವುದರ ಹಿಂದಿನ ಕಾರಣ ಹೇಳಿದ್ದಾರೆ. ಅಲ್ಲದೆ ರೆಸ್ಟೋರೆಂಟ್ ನಡೆಸುವಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಎದುರಾಗಿಲ್ಲ ಎಂದು ನಟಿ ಹೇಳಿದ್ದಾರೆ.
‘ಹಳೆಯ ರೆಸ್ಟೋರೆಂಟ್ ಮುಚ್ಚಿದ ಜಾಗದಲ್ಲೇ, ಶೀಘ್ರದಲ್ಲೇ ಹೊಸ ದಕ್ಷಿಣ ಭಾರತೀಯ ರೆಸ್ಟೋರೆಂಟ್ ತೆರೆಯಲಾಗುವುದು. ಮತ್ತೊಂದೆಡೆ, ಜುಹುದಲ್ಲಿ ‘ಬಾಸ್ಟಿಯನ್’ ಹೆಸರಿನ ಮತ್ತೊಂದು ರೆಸ್ಟೋರೆಂಟ್ ತೆರೆಯಲಾಗುವುದು ಎಂದು ಶಿಲ್ಪಾ ತಿಳಿಸಿದ್ದಾರೆ.
‘ನೀವು ಕಷ್ಟಪಟ್ಟು ಕೆಲಸ ಮಾಡಿ ಖ್ಯಾತಿಯನ್ನು ಗಳಿಸಿದಾಗ, ಕೆಲವು ವದಂತಿಗಳು ನಿಮ್ಮ ಜೊತೆ ತಳುಕು ಹಾಕಿಕೊಳ್ಳುತ್ತವೆ. ನಮ್ಮ ನಿಜವಾದ ಆರಂಭವು ಬಾಂದ್ರಾದಿಂದ. ಈ ಅಧ್ಯಾಯವು ಮುಕ್ತಾಯಗೊಳ್ಳುತ್ತದೆ, ಇನ್ನೂ ಎರಡು ಅಧ್ಯಾಯಗಳು ಪ್ರಾರಂಭವಾಗಲಿವೆ. ಅವು ನಿಮಗಾಗಿ ಕಾಯುತ್ತಿವೆ. ನಮ್ಮ ಬ್ರ್ಯಾಂಡ್ ಹೊಸ ಪ್ರಯಾಣವನ್ನು ಪ್ರಾರಂಭಿಸಲಿದೆ… ಶೀಘ್ರದಲ್ಲೇ ಅದರ ಬಗ್ಗೆ ನಿಮಗೆ ತಿಳಿಸಲಾಗುವುದು’ ಎಂದು ಹೇಳಿಕೆಯಲ್ಲಿ ನಟಿ ತಿಳಿಸಿದ್ದಾರೆ.
ಬಾಸ್ಟಿಯನ್ ಬಾಂದ್ರಾ ಔಟ್ಲೆಟ್ ಅನ್ನು ಈಗ ‘ಅಮ್ಮಕೈ’ ಎಂಬ ದಕ್ಷಿಣ ಭಾರತೀಯ ರೆಸ್ಟೋರೆಂಟ್ ಆಗಿ ಪರಿವರ್ತಿಸಲಾಗುತ್ತಿದೆ ಎಂದು ಶಿಲ್ಪಾ ಶೆಟ್ಟಿ ಹೇಳಿದರು. ಬ್ರ್ಯಾಂಡ್ ಜುಹುಗೆ ಸ್ಥಳಾಂತರಗೊಳ್ಳುತ್ತಿದ್ದು, ಬಾಸ್ಟಿಯನ್ ಬೀಚ್ ಕ್ಲಬ್ ಮತ್ತೆ ತೆರೆಯಲಿದೆ ಎಂದಿದ್ದಾರೆ.