ವಿಜಯಸಾಕ್ಷಿ ಸುದ್ದಿ, ಗದಗ : ಪ್ರಸ್ತುತ ದಿನಮಾನದ ಆಹಾರ, ಜೀವನಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹೃದಯಾಘಾತ, ರಕ್ತದ ಒತ್ತಡ, ಸಕ್ಕರೆ ಖಾಯಿಲೆ ಹೆಚ್ಚಾಗುತ್ತಿರುದಕ್ಕೆ ನಮ್ಮ ಜೀವನ ಶೈಲಿಯಲ್ಲಿನ ಬದಲಾವಣೆಗಳೇ ಕಾರಣ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2686ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿ, ದೈಹಿಕ ಶ್ರಮಗಳು ಕಡಿಮೆಯಾಗಿ, ಮಾನಸಿಕ ಒತ್ತಡಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಮನುಷ್ಯನ ಆಯುಷ್ಯ ಕೂಡ ಬಹಳಷ್ಟು ಕಡಿಮೆಯಾಗುತ್ತಿದೆ. ದುಶ್ಚಟಗಳನ್ನು ತ್ಯಜಿಸಿ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ‘ಕಿತ್ತೂರು ಚೆನ್ನಮ್ಮ’ ಪ್ರಶಸ್ತಿ ಪಡೆದ ನಿಮಿತ್ತ ವಿ.ವಿ. ಹಿರೇಮಠರನ್ನು ಸಂಮಾನಿಸಲಾಯಿತು. ತಾಲೂಕಾ ಬಣಜಿಗರ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಇಂಗಳಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಣಜಿಗ ಮಹಿಳಾ ಘಟಕದ ಸದಸ್ಯರು ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಸ್ನೇಹಾ ಬಳ್ಳೊಳ್ಳಿ, ವಚನ ಚಿಂತನೆಯನ್ನು ದೀಪಾ ಸುರೇಶ ನಿಲೂಗಲ್ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಬಸವರಾಜ ರಾಮನಕೊಪ್ಪ ಹಾಗೂ ಬಣಜಿಗ ಮಹಿಳಾ ಸಮಾಜ ತಾಲೂಕಾ ಘಟಕ, ಗದಗ ಮತ್ತು ವ್ಯಾಪಾರೋದ್ಯಮಿ ಉಮೇಶ ಗಂಗಾಧರಪ್ಪ ನಾಲ್ವಾಡರನ್ನು ಪೂಜ್ಯರು ಸಂಮಾನಿಸಿದರು.
ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.
ಹೆಸರಾಂತ ವೈದ್ಯ ಡಾ. ಗಣೇಶ ಕುಂದಾಪೂರ ಉಪನ್ಯಾಸ ನೀಡಿ, ಕ್ಯಾನ್ಸರ್ನ್ನು ಮೊದಲನೇ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಕ್ಯಾನ್ಸ್ರ್ ವಾಸಿಯಾಗುವುದು ಖಚಿತ. ಕ್ಯಾನ್ಸ್ರ್ ರೋಗ ಎಂದ ತಕ್ಷಣ ಭಯಪಡಬಾರದು. ಸಿಗರೇಟ್, ಗುಟಕಾ, ಸೇವನೆಯಿಂದ ಕ್ಯಾನ್ಸ್ರ್ಗೆ ಬಹಳಷ್ಟು ಜನ ತುತ್ತಾಗುತ್ತಿದ್ದಾರೆ. ಸಾಧ್ಯವಾದಷ್ಟು ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದ ಅವರು, ಕ್ಯಾನ್ಸ್ರ್ ಕುರಿತು ಅನೇಕ ಮಹತ್ವದ ಸಂಗತಿಗಳನ್ನು ಜನರಿಗೆ ತಿಳಿಸಿಕೊಟ್ಟರು.