ವಿಜಯಸಾಕ್ಷಿ ಸುದ್ದಿ, ಗದಗ: ಸದೃಢ ಯುವಕರಿಂದ ಸದೃಢ ದೇಶ ನಿರ್ಮಾಣಗೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ಡಾ. ಸಂಜೀವ ಕುಲಕರ್ಣಿ ಹೇಳಿದರು.
ಅವರು ಗದುಗಿನ ಲಯನ್ಸ್ ಶಾಲೆಯ ಸಭಾಂಗಣದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್, ಗದಗ ಸನ್ಮಾರ್ಗ ಕಾಲೇಜು, ಗದಗ ಐಎಂಎ, ಗದಗ ಚರ್ಮರೋಗ ತಜ್ಞರ ಸಂಘ, ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಿಂದ ಕ್ಯಾನ್ಸ್ರ್ ಹಾಗೂ ಚರ್ಮ ಸುರಕ್ಷತೆ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಧೂಮಪಾನ, ತಂಬಾಕು ಜಗಿಯುವದು ಹಾಗೂ ಮದ್ಯಪಾನ ಕ್ಯಾನ್ಸರ್ಗೆ ಪ್ರಮುಖ ಕಾರಣಗಳಾಗಿವೆ. ಯುವಕರು ಅದರಲ್ಲೂ ವಿಶೇಷವಾಗಿ ಹೈಸ್ಕೂಲ್-ಕಾಲೇಜು ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಪೌಷ್ಠಿಕ ಮತ್ತು ಸಾತ್ವಿಕ ಆಹಾರ ಸೇವನೆ, ವಾಯು ವಿಹಾರ, ಯೋಗ, ಧ್ಯಾನ, ಆಧ್ಯಾತ್ಮಿಕತೆಯಿಂದ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡರೆ ಜೀವನ ಸನ್ಮಾರ್ಗದಲ್ಲಿ ಹಾಗೂ ಸದೃಢ ಆರೋಗ್ಯದಲ್ಲಿ ಸಾಗುವದು ಎಂದರು.
ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೆರ್ಣೆಕರ, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ವಲಯ ಅಧ್ಯಕ್ಷ ರಮೇಶ ಶಿಗ್ಲಿ, ಸದಸ್ಯರಾದ ಮಂಜುನಾಥ ವೀರಲಿಂಗಯ್ಯನಮಠ, ವೀರಣ್ಣ ಪಟ್ಟಣಶೆಟ್ಟಿ, ಶ್ಯಾಮ್ ಮಿಸ್ಕಿನ್, ಕಾರ್ತಿಕ ಪಾಲನಕರ ಹಾಗೂ ಲಯನ್ಸ್ ಮಹಿಳಾ ಘಟಕದ ಅಧ್ಯಕ್ಷೆ ಪೂಜಾ ಪಾಟೀಲ, ಕಾರ್ಯದರ್ಶಿ ಸುರೇಖಾ ಮಲ್ಲಾಡದ, ಸದಸ್ಯರಾದ ವೀಣಾ ಸುಲಾಖೆ, ಅನುರಾಧಾ ಮಿಸ್ಕಿನ್ ಸೇರಿದಂತೆ ವೈದ್ಯರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಸುಪ್ರೀತ್ ಅವರು ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಕಾರಣಗಳು, ಅಪಾಯಕಾರಿ ಅಂಶಗಳು, ಲಕ್ಷಣಗಳು ಮತ್ತು ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಡಾ. ತುಕಾರಾಂ ಸೂರಿ ಅವರು ಚರ್ಮ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿದರು.