ವಿಜಯಸಾಕ್ಷಿ ಸುದ್ದಿ, ಗದಗ : ಜನಮುಖಿ, ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿರುವ ಸೇವಾ ಭಾರತಿ ಟ್ರಸ್ಟ್ನ ಸೇವೆ ಅಮೂಲ್ಯವಾದದ್ದು ಎಂದು ಗದಗ-ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷ, ಗಣ್ಯ ಉದ್ಯಮಿ ಶಿವಣ್ಣ ಮುಳಗುಂದ ಹೇಳಿದರು.
ಅವರು ಸೋಮವಾರ ಬೆಟಗೇರಿಯ ಸೇವಾಭಾರತಿ ಅಮೂಲ್ಯ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಗೊಂಡ ಗಂಡು ಮಗುವನ್ನು ಮೈಸೂರು ಜಿಲ್ಲೆಯ ಕೇತುಪುರ ಗ್ರಾಮದ ಮಕ್ಕಳಿಲ್ಲದ ದಂಪತಿಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ಹೆತ್ತವರಿಗೆ ಬೇಡವಾದ ಮಗುವನ್ನು ಪೋಷಿಸಿ ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಕಾನೂನಿನ ಚೌಕಟ್ಟಿನಲ್ಲಿ ದತ್ತು ನೀಡುವ ಕಾರ್ಯವನ್ನು ಮಾಡುತ್ತಿರುವ ಈ ಸಂಸ್ಥೆಯ ಕಾರ್ಯ ಮಾನವೀಯತೆ ಹಾಗೂ ಪುಣ್ಯದ ಕೆಲಸವಾಗಿದೆ. ಒಬ್ಬರಿಗೆ ಬೇಡವಾದ ಮಗು ಇನ್ನೊಬ್ಬರಿಗೆ ಮುದ್ದು. ಅಷ್ಟೇ ಅಲ್ಲ, ಮಗುವಿಗೆ ಭವ್ಯ ಭವಿಷ್ಯ ನಿರ್ಮಾಣಕ್ಕೆ ಈ ಸಂಸ್ಥೆ ಕೊಂಡಿಯಾಗಿ ಕಾರ್ಯ ಮಾಡುತ್ತಿರುವದು ಅಭಿನಂದನೀಯ ಎಂದರು.
ಸಂಘ-ಸಂಸ್ಥೆಗಳನ್ನು ಕಟ್ಟುವದು, ಮುನ್ನಡೆಸುವದು ಬಹು ಕಷ್ಟದ ಕೆಲಸ. ಆದಾಗ್ಯೂ ಸೇವಾ ಭಾರತಿ ಟ್ರಸ್ಟ್ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಗದಗ ಪರಿಸರದಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದೆ. ಈ ಸೇವಾ ಕಾರ್ಯದಲ್ಲಿ ತಮ್ಮನ್ನು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡ ಸೇವಾಕರ್ತರನ್ನು ಅಭಿನಂದಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಸಖಿ ಒನ್ ಅಧೀಕ್ಷಕಿ ಸುಜಾತಾ ಶಾಸ್ತ್ರೀಮಠ ಮಾತನಾಡಿ, ಮನುಷತ್ವ ಮತ್ತು ಮಾನವೀಯತೆಯನ್ನು ಮಿಡಿಯುವ ಈ ಸಮಯ ಅವಿಸ್ಮರಣೀಯವಾದದ್ದು. ಮಗುವಿನ ಭವಿಷ್ಯದ ದಿಕ್ಕು ಬದಲಿಸುವ ಪರ್ವ ಕಾಲವಿದು ಎಂದರು.
ಗದಗ-ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷೆ ನಾಗರತ್ನಾ ಮುಳಗುಂದ ಹಾಗೂ ಶಿವಣ್ಣ ಮುಳಗುಂದ ದಂಪತಿಗಳು ಹರೀಶ್ಕುಮಾರ ಹಾಗೂ ನಾಗಮ್ಮ ದಂಪತಿಗಳಿಗೆ ಮಗುವನ್ನು ಹಸ್ತಾಂತರಿಸಿ ಮಗುವಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಉಮಾ ಚನ್ನಪ್ಪನವರ ಪ್ರಾರ್ಥಿಸಿದರು. ಸುಭಾಸ ಬಬಲಾದಿ ಸ್ವಾಗತಿಸಿದರು. ಮಂಜುನಾಥ ಚನ್ನಪ್ಪನವರ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ನಾಗವೇಣಿ ಕಟ್ಟಿಮನಿ ಪರಿಚಯಿಸಿದರು. ನರಸಿಂಹ ಕಾಮಾರ್ತಿ ನಿರೂಪಿಸಿದರು. ಕೊನೆಗೆ ರಾಜೇಶ ಖಟವಟೆ ವಂದಿಸಿದರು.
ಸಮಾರಂಭದಲ್ಲಿ ಲಲಿತಾಬಾಯಿ ಮೇರವಾಡೆ, ಗುರುಸಿದ್ಧಪ್ಪ ಕೊಣ್ಣೂರ, ಅನಿಲ ಗಡ್ಡಿ, ಬಸವರಾಜ ನಾಗಲಾಪೂರ, ಗಣೇಶ ಮಾಗುಂಡ, ಆನಂದಪ್ಪ ಅಂಟಿನ, ಜೀತೇಂದ್ರ ಶಹಾ, ಬಸವರಾಜ ಪಲ್ಲೇದ, ಅಭಿಷೇಕ ಮಾಳೋದೆ, ಪ್ರಮೋದ ಹಿರೇಮಠ, ಶ್ರೀಧರ ಕಾಂಬಳೆ ಮುಂತಾದವರು ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ, ಇದು ಮನ ಮಿಡಿಯುವ ಸಂದರ್ಭ. ಮಾತು ಕೃತಿಯಾಗಿ ಪರಿವರ್ತನೆಗೊಳ್ಳುವ ಕಾಲಘಟ್ಟ. ದತ್ತು ಮಗುವನ್ನು ಪಡೆದ ದಂಪತಿಗಳು ಮಗುವಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಬದ್ಧತೆಯಿಂದ ಕಾರ್ಯೋನ್ಮುಖರಾಗಲಿ ಎಂದರು.