ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಹಿರೇಮಠದಲ್ಲಿ ಸೋಮವಾರ ನಡೆದ ಜಾತ್ರಾ ಮಹೋತ್ಸವ, ಗುರು ಪರಂಪರೆ ಸ್ಮರಣೋತ್ಸವ ಹಾಗೂ 9 ದಿನಗಳಿಂದ ನಡೆದ ಹಾನಗಲ್ ಗುರು ಕುಮಾರ ಶಿವಯೋಗಿಗಳ ಪ್ರವಚನದ ಅಂಗವಾಗಿ ಶಿವಯೋಗಿ ಶಿವಾಚಾರ್ಯ ವಿರಚಿತ ಸಿದ್ಧಾಂತ ಶಿಖಾಮಣಿ ಗ್ರಂಥ, ವಚನಾಮೃತ ಗ್ರಂಥ ಹಾಗೂ ಹಿಂದಿನ ಗುರುಗಳ ಭಾವಚಿತ್ರದ ಅಡ್ಡಪಲ್ಲಕ್ಕಿ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.
ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಅಡ್ಡಪಲಕ್ಕಿಯು ಹಿರೇಮಠದಿಂದ ಪ್ರಾರಂಭವಾಗಿ ಗಣೇಶ ಗುಡಿ, ನಾಗರಕೆರೆ, ಮಾರಿಕಾಂಬಾ ದೇವಸ್ಥಾನ, ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣದ ಮೂಲಕ ಮರಳಿ ಹಿರೇಮಠದ ಆವರಣಕ್ಕೆ ಬಂದಿತು.
ಪಲ್ಲಕ್ಕಿ ಮುಂದೆ ಮಹಿಳೆಯರು ಕುಂಭವನ್ನು ಹೊತ್ತು ಸಾಗಿದರು. ಚಂಡೆ-ಮದ್ದಳೆ, ಕರಡಿ ಮಜಲು, ಡೊಳ್ಳು ಕುಣಿತ ಉತ್ಸವಕ್ಕೆ ಇನ್ನಷ್ಟು ಮೆರಗು ನೀಡಿದ್ದವು. ಸಾರೋಟಿನಲ್ಲಿ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ವಿರಾಜಮಾನರಾಗಿದ್ದರು. ನಂತರ ನೆರೆದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.
ನರೇಗಲ್ಲ ಸೇರಿದಂತೆ ದ್ಯಾಂಪೂರ, ಮಲ್ಲಾಪೂರ, ತೋಟಗಂಟಿ, ಕೋಚಲಾಪೂರ, ಕೋಡಿಕೊಪ್ಪ, ಜಕ್ಕಲಿ, ಮಾರನಬಸರಿ, ಬೂದಿಹಾಳ, ನಿಡಗುಂದಿ, ನಿ.ಕೊಪ್ಪ, ಕೋಟುಮಚಗಿ ಹಾಗೂ ಅಬ್ಬಿಗೇರಿ ಗ್ರಾಮದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.