ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ಗದಗ ಹಾಗೂ ಸಹಕಾರ ಇಲಾಖೆ ಇವರುಗಳ ಸಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಇತರೆ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮವು ಬುಧವಾರ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಜರುಗಿತು.
ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಖಾಸಗೀಕರಣ, ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣಗಳ ನಡುವೆ ಬಲವಾಗಿ ಬೇರು ಬಿಟ್ಟಿರುವ ಸಹಕಾರ ಕ್ಷೇತ್ರವು ಸದಸ್ಯರ ಆರ್ಥಿಕ ಬಲವರ್ಧನೆಗಾಗಿ ಸುಧಾರಿತ ತಂತ್ರಾಧಾರಿತ ಸೇವೆಗಳನ್ನು ನೀಡುತ್ತಾ ಬಂದಿದೆ ಎಂದರು.
ಸಹಕಾರ ಕ್ಷೇತ್ರ ಪ್ರಾರಂಭವಾದಾಗಿನಿಂದ ರೈತರಿಗೆ, ಕಾರ್ಮಿಕರಿಗೆ, ಆರ್ಥಿಕವಾಗಿ ಅಬಲರಾದ ಜನರಿಗೆ ನೆರವಾಗಲು ತಾನೇ ರಚಿಸಿಕೊಂಡು ತಾನೇ ಮುನ್ನಡೆಸುವ ಉದ್ದೇಶದಿಂದ ಪ್ರಾರಂಭಗೊಂಡಿದೆ. ಇಂದು ಸಹಕಾರ ಕ್ಷೇತ್ರ ಪ್ರವೇಶಿಸದ ಯಾವುದೇ ವಲಯವಿಲ್ಲ. ಅಷ್ಟರಮಟ್ಟಿಗೆ ಸಹಕಾರ ಕ್ಷೇತ್ರ ವಿಸ್ತಾರವಾಗಿ ಬೆಳೆದು ನಿಂತಿದೆ. ಸಹಕಾರ ಕ್ಷೇತ್ರವು ಎಲ್ಲಾ ವರ್ಗದ ಎಲ್ಲಾ ಜನರ ಆಶೋತ್ತರಗಳನ್ನು ಪೂರೈಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಾ ಒಂದು ಆರ್ಥಿಕ ಶಕ್ತಿಯಾಗಿ ರೂಪಿತವಾಗಿದೆ ಎಂದರು.
ಗದಗ ಜಿಲ್ಲೆಯ ಸಹಕಾರ ಸಂಘಗಳ ಉನಿಬಂಧಕರಾದ ಎಸ್.ಎಸ್. ಕಬಾಡೆ ಮಾತನಾಡಿ, ಜನರಲ್ಲಿ ಉಳಿತಾಯ ಮನೋಭಾವನೆ ಬೆಳೆಸಲು ಹಾಗೂ ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿಸಲು ಮಹಿಳೆಯರು, ಬಡವರು, ಸೇರಿದಂತೆ ಸಮಾಜದ ಕಡೆಯ ವ್ಯಕ್ತಿಗೂ ತಲುಪಲು ಸಹಕಾರ ಕ್ಷೇತ್ರವು ಸೂಕ್ತ ಮಾರ್ಗವಾಗಿದೆ ಎಂದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸದಸ್ಯರುಗಳಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ. ಎಪಿಎಲ್ ಮತ್ತು ಬಿಪಿಎಲ್ ಎಂಬ ಯಾವುದೇ ವ್ಯತ್ಯಾಸವಿಲ್ಲದೆ ಈ ಯೊಜನೆ ಎಲ್ಲರಿಗೂ ಅನ್ವಯಿಸುತ್ತದೆ. ಯಾವುದೇ ವಯೋಮಿತಿ ನಿರ್ಭಂಧ ಇರುವುದಿಲ್ಲ. ಯಶಸ್ವಿನಿ ಯೊಜನೆ ಸದಸ್ಯರು ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಯೋಜನೆಯಡಿ ಗುರುತಿಸಲ್ಪಟ್ಟಿರುವ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ಸೌಲಭ್ಯ ಪಡೆಯಲು ಅವಕಾಶ ಈ ಮೇಲಿನ ಎಲ್ಲ ವಿಷಯಗಳು ಯಶಸ್ವಿನಿ ಯೊಜನೆಯ ವೈಶಿಷ್ಟ್ಯತೆಗಳಾಗಿವೆ ಎಂದರು.
ಗದಗ ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷ ಸಿ.ಎಂ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಹಕಾರ ಸಂಘಗಳಲ್ಲಿ ಲೆಕ್ಕ ಪತ್ರಗಳ ನಿರ್ವಹಣೆ ಹಾಗೂ ಲೆಕ್ಕಪರಿಶೋಧನೆ, ಸಹಕಾರ ಸಂಘಗಳಲ್ಲಿ ಆಡಳಿತಾತ್ಮಕ ನಿರ್ವಹಣೆ, ಯಶಸ್ವಿನಿ ಯೋಜನೆ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳಿಂದ ಇಂದಿನ ಕಾರ್ಯಕ್ರಮದಲ್ಲಿ ತಿಳಿದುಕೊಂಡು ಸಂಘದಲ್ಲಿ ಅಳವಡಿಸಿಕೊಂಡು ಸಂಘದ ಏಳಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ರಾಣಿ ಚನ್ನಮ್ಮ ಮಾನಿನಿ ಸಹಕಾರ ಸಂಘದ ನಿರ್ದೇಶಕರಾದ ಸಾವಿತ್ರಿ ಮೊರಬದ ಹಾಗೂ ಸಂಗಡಿಗರು ಪ್ರಾರ್ಥಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್.ಕರಿಯಪ್ಪನವರ ನಿರೂಪಿಸಿದರೆ, ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ.ಯಲಿಗಾರ ವಂದಿಸಿದರು.
ಕಾರ್ಯಕ್ರಮದಲ್ಲಿ `ಸಹಕಾರ ಸಂಘಗಳಲ್ಲಿ ಲೆಕ್ಕ ಪತ್ರಗಳ ನಿರ್ವಹಣೆ ಹಾಗೂ ಲೆಕ್ಕಪರಿಶೋಧನೆ’ ಕುರಿತು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕ ಅರವಿಂದ ಎನ್. ನಾಗಜ್ಜನವರ, `ಸಹಕಾರ ಸಂಘಗಳಲ್ಲಿ ಆಡಳಿತಾತ್ಮಕ ನಿರ್ವಹಣೆ’ ಕುರಿತು ರೋಣ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ ಮುಧೋಳ ಹಾಗೂ `ಯಶಸ್ವಿನಿ ಯೋಜನೆ’ ಕುರಿತು ಗದಗ ಯಶಸ್ವಿನಿ ಕೋ-ಆರ್ಡಿನೇಟರ್ ಪ್ರಮೋದ ಕುಶಬಿ ಉಪನ್ಯಾಸ ನೀಡಿದರು.