ಗದಗ: ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧದ ಟ್ರ್ಯಾಪ್ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಪ್ರತಿಕ್ರಿಯೆ ಹುಟ್ಟಿಸಿದೆ. ಕಮಿಷನ್ ಬೇಡಿಕೆ ಆರೋಪದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಪೂರ್ವಯೋಜಿತ ಕಾರ್ಯಾಚರಣೆ ನಡೆಸಿ, ಹಣ ಸ್ವೀಕಾರದ ವೇಳೆ ಟ್ರ್ಯಾಪ್ ಮಾಡಿದ್ದಾರೆ.
ಲಿಖಿತ ದೂರು ಆಧರಿಸಿ ರೂಪಿಸಿದ ಟ್ರ್ಯಾಪ್ನಲ್ಲಿ ಆರೋಪ ಸಂಬಂಧಿತ ಹಣ ಹಾಗೂ ದಾಖಲೆಗಳನ್ನು ಸ್ಥಳದಲ್ಲೇ ವಶಪಡಿಸಿಕೊಳ್ಳಲಾಗಿದೆ. ಹಣದ ಹಾದಿ, ಸಂಭಾಷಣೆ ಮತ್ತು ಮಧ್ಯವರ್ತಿಗಳ ಪಾತ್ರ ಕುರಿತು ಅಧಿಕಾರಿಗಳು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ.
ಮಧ್ಯಾಹ್ನ 2ರಿಂದ ರಾತ್ರಿ 1.30ರವರೆಗೆ ನಡೆದ ವಿಚಾರಣೆ ವೇಳೆ ಶಾಸಕ ಲಮಾಣಿ ಹಾಗೂ ಅವರ ಪಿಎಗಳಾದ ಮಂಜುನಾಥ್ ವಾಲ್ಮಿಕಿ ಮತ್ತು ಗುರು ಲಮಾಣಿ ಅವರನ್ನು ಪ್ರತ್ಯೇಕವಾಗಿ ಪ್ರಶ್ನಿಸಲಾಗಿದೆ. ಟೆಂಡರ್ ಅನುಮೋದನೆ, ಕಾಮಗಾರಿ ಮಂಜೂರು, ಹಣದ ವ್ಯವಹಾರಗಳ ಕುರಿತು ವಿವರವಾದ ಪರಿಶೀಲನೆ ನಡೆದಿದೆ.
ವಿಚಾರಣೆ ಬಳಿಕ ಶಾಸಕರನ್ನು ಕರೆದೊಯ್ಯುವ ವೇಳೆ ಕಾರ್ಯಕರ್ತರು ವಾಹನ ತಡೆಯಲು ಯತ್ನಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತು. ಪೊಲೀಸರು ಬಿಗಿ ಭದ್ರತೆಯಲ್ಲಿ ಸ್ಥಳದಿಂದ ಕರೆದೊಯ್ದರು.
ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ, ಬಳಿಕ ಬೆಂಗಳೂರಿನ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಕಸ್ಟಡಿ ಕೋರಿ ಮನವಿ ಸಲ್ಲಿಸುವ ಸಾಧ್ಯತೆ ಇದೆ.
ಶಾಸಕರ ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದು, ಫೊರೆನ್ಸಿಕ್ ಪರೀಕ್ಷೆ ಮುಂದಿನ ಪ್ರಮುಖ ಹಂತವಾಗಲಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳು ರಾಜ್ಯ ರಾಜಕೀಯದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುವ ಸಾಧ್ಯತೆ ಇದೆ.



