ಬೆಂಗಳೂರು:- ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅಶ್ಲೀಲವಾಗಿ ಪದ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದ ಸಿಟಿ ರವಿ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಈ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಬೆಂಗಳೂರಲ್ಲಿ ಸಿಟಿ ರವಿ ಅವರಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ಕಾರ್ಯಕರ್ತರು ಪಟಾಕಿ ಸಿಡಿಸಿ, ಹಾರ ಹಾಕಿ ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಂಡಿದ್ದಾರೆ. ಸಿ.ಟಿ ರವಿ ಅವರನ್ನ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದಾರೆ.
ಇದೇ ವೇಳೆ ಕೈ ಮುಗಿದು ಧನ್ಯವಾದ ಹೇಳಿರುವ ಸಿ.ಟಿ ರವಿಗೆ, ನಿಮ್ಮೊಂದಿಗೆ ನಾವಿದ್ದೇವೆ, ಹೆದರಬೇಡಿ ಅಭಯ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ರವಿ, ನೀವೆಲ್ಲ ನನಗೆ ಧೈರ್ಯ ತುಂಬಿದ್ದೀರಿ, ಎಲ್ಲವನ್ನೂ ಮಾತನಾಡೋಣ, ತುಂಬಾ ಧನ್ಯವಾದ ಎಂದು ಭಾವುಕರಾಗಿದ್ದಾರೆ.
24 ಗಂಟೆ ಪೊಲೀಸರ ವಶದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೈಕೋರ್ಟ್ ಆದೇಶದಡಿ ಬಿಡುಗಡೆ ಆಗಿದ್ದೇ ತಡ ಚಿಕ್ಕಮಗಳೂರು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರು ಡ್ರಮ್ ಸೆಟ್ ಶಬ್ಧಕ್ಕೆ ರಸ್ತೆ-ರಸ್ತೆಯಲ್ಲಿ ಕುಣಿದು-ಕುಪ್ಪಳಿಸಿ ಸಂಭ್ರಮಿಸಿದರು.