ಮಂಡ್ಯ: ನಿಮ್ಮ ಹೃದಯದಲ್ಲಿ ಸ್ಥಾನ ಪಡೆದು ನಂತರ ನಾನು ಈ ಮಣ್ಣಿಗೆ ಹೋಗುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಭಾವುಕರಾಗಿದ್ದಾರೆ. ಮಂಡ್ಯದಲ್ಲಿ ಮೈಶುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು,
ಹೆಚ್ಎಮ್ಟಿ ಕಾರ್ಖಾನೆ ಉಳಿಸಲು ಪಣತೊಟ್ಟಿದ್ದೇನೆ. ಆದರೆ, ಅದಕ್ಕೆ ರಾಜ್ಯ ಸರ್ಕಾರ ಭೂಮಿ ಕೊಡುತ್ತಿಲ್ಲ. ನನಗೆ ಮಂಡ್ಯ ಜನ ಸ್ವಲ್ಪ ಸಮಯ ಕೊಡಿ. ನನ್ನ ಮೇಲೆ ಜಿಲ್ಲೆಯ ಜನ ಸಾಕಷ್ಟು ನಿರೀಕ್ಷೆ ಇಟ್ಟಿದ್ದೀರಿ. ನನ್ನ ಒಂದು ಕಣ್ಣು, ಹೃದಯ ಇಲ್ಲೇ ಇರುತ್ತೆ.
ನಿಮ್ಮ ನಿರೀಕ್ಷೆ ಆಸೆಗಳನ್ನು ನಿರಾಸೆ ಮಾಡಲ್ಲ. ನನಗೆ ಬೇರೆ ಯಾವುದೇ ಆಸೆ ಇಲ್ಲ. ನನಗೆ ಬೇಕಿರುವುದು ನಿಮ್ಮ ಹೃದಯದಲ್ಲಿ ಸ್ಥಾನ. ಆ ಶಾಶ್ವತ ಸ್ಥಾನ ಪಡೆದು ನಂತರ ನಾನು ಈ ಮಣ್ಣಿಗೆ ಹೋಗುತ್ತೇನೆ ಎಂದು ಭಾವುಕರಾದರು.
ಮಂಡ್ಯ ಮಿಮ್ಸ್ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ನಿಧನ ಆಗಿದ್ದು ಮತ್ತು ಪೊಲೀಸರ ವರ್ತನೆಯಿಂದ ನಾಯಿ ಕಚ್ಚಿದ ಮಗು ಮೃತಪಟ್ಟ ಎರಡೂ ಪ್ರಕರಣಗಳು ನೋವು ತರುತ್ತದೆ. ಈ ವಿಷಯದಲ್ಲಿ ಸರ್ಕಾರಿ ಅಧಿಕಾರಿಗಳು ಹಣದಾಸೆಗೆ ಜೀವ ಕಳೆಯಬಾರದು. ಮಿಮ್ಸ್ ಆಸ್ಪತ್ರೆ ಸಮಸ್ಯೆ ಪರಿಹಾರಕ್ಕೆ ತಕ್ಷಣ ಸಿಎಸ್ಆರ್ ಫಂಡ್ಗೆ ಎರಡೂವರೆ ಕೋಟಿ ರೂ. ಕೊಡಿಸಿದ್ದೇನೆ ಎಂದು ತಿಳಿಸಿದರು.