ಬೆಂಗಳೂರು: 1ನೇ ತರಗತಿಗೆ 5 ವರ್ಷ 5 ತಿಂಗಳು ದಾಖಲಾತಿ ಮಿತಿ ಸಡಿಲಿಕೆ ಮಾಡಲಾಗಿದೆ. ಇದು ಕೇವಲ ರಾಜ್ಯಪಠ್ಯ ಕ್ರಮಕ್ಕೆ ಮಾತ್ರ ಅನ್ವಯ. ಐಸಿಎಸ್ಸಿ, ಸಿಬಿಎಸ್ಇ ಬೋರ್ಡ್ ಬಗ್ಗೆ ನಾವು ನಿರ್ಧಾರ ಮಾಡಲು ಆಗೊಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
1ನೇ ತರಗತಿ ಸೇರುವ ಮಕ್ಕಳ ವಯೋಮಿತಿ ಸಡಿಲಿಕೆ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪೋಷಕರು ವಯೋಮಿತಿ ಗೊಂದಲದಲ್ಲಿ ಇದ್ದಾರೆ. ಎರಡು ತಿಂಗಳು ರಿಯಾಯ್ತಿ ಕೊಡಬಹುದು. ದೇಶದಲ್ಲಿ ಈಗಾಗಲೇ 6 ವರ್ಷ ಇದೆ. ಈ ವರ್ಷ ಮಾತ್ರ ವಯಸ್ಸಿನ ಮಿತಿ ಸಡಿಲ ಮಾಡಲಾಗುವುದು. ಮುಂದಿನ ವರ್ಷದಿಂದ 1ನೇ ತರಗತಿಗೆ ಸೇರಲು 6 ವರ್ಷ ನಿಯಮ ಕಡ್ಡಾಯ ಎಂದು ತಿಳಿಸಿದರು.
ಎಸ್ಇಪಿ ಅವರಿಂದ ವರದಿ ಕೇಳಿದ್ವಿ. ಅವರು ಮೊದಲು 6 ವರ್ಷ ಅಂತ ಹೇಳಿದ್ರು. ಆಮೇಲೆ ನಮ್ಮ ಇಲಾಖೆ ಅವರ ಜೊತೆ ಮಾತಾಡಿದ್ವಿ. ಎಸ್ಇಪಿ ಸೂಚನೆ ಮೇಲೆ 5 ವರ್ಷ 5 ತಿಂಗಳು ಆಗಿದ್ದರೆ ದಾಖಲಾತಿ ಮಾಡಬೇಕು. ಸಮೀಕ್ಷೆಗೆ ತಂತ್ರಜ್ಞಾನ ಬಳಕೆ ಮಾಡಿ ಮತ್ತೆ ಮಾಡಲಿ ಎಂದರು.
ವಯೋಮಿತಿ ಸಡಿಲ ಮಾಡುವುದಕ್ಕೆ ಎಲ್ಲರೂ ಒತ್ತಡ ಹಾಕಿದ್ದರು. ಮಕ್ಕಳನ್ನ ಮಿಷನ್ ರೀತಿ ಓದಿಸೋಕೆ ಪೋಷಕರು ಮುಂದಾಗಬಾರದು. ಮಕ್ಕಳಿಗೆ ಒತ್ತಡ ಹಾಕುವುದು ಸರಿಯಲ್ಲ. ಒತ್ತಡ ಇಲ್ಲದೆ ಮಕ್ಕಳು ಓದಬೇಕು ಎಂದು ಸಲಹೆ ನೀಡಿದರು.