ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಗೋವನಾಳದಲ್ಲಿ ಸೋಮವಾರ ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಗ್ರಾಮದಲ್ಲಿನ ರೈತಪರ ಹೋರಾಟಗಾರರು ಹಾಗೂ ಹುತಾತ್ಮರಾದ ರೈತರ ಭಾವಚಿತ್ರ(ವೀರಗಲ್ಲು)ಕ್ಕೆ ಪೂಜೆ, ಶ್ರದ್ಧಾಂಜಲಿ ಸಲ್ಲಿಸಿದರು.
ಸುಮಾರು 32 (1993) ವರ್ಷಗಳ ಹಿಂದೆ ಗ್ರಾಮದ ರೈತರಾದ ಫಕ್ಕೀರಗೌಡ ಮಣಕಟ್ಟಿ, ರಾಮಣ್ಣ ಹುಬ್ಬಳ್ಳಿ, ಉಡಚಪ್ಪ ವಾಲಿಕಾರ ಈ ಮೂವರು ರೈತರು ಬೆಂಗಳೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋದಾಗ ಜರುಗಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಸ್ಮರಣಾರ್ಥವಾಗಿ ಗ್ರಾಮಸ್ಥರು ಗ್ರಾಮದ ಅಗಸಿಯಲ್ಲಿ ವೀರಗಲ್ಲು ಸ್ಥಾಪಿಸಿ ಪ್ರತಿವರ್ಷ ರೈತ ಹುತಾತ್ಮ ದಿನಾಚರಣೆಯಂದು ಸ್ಮರಿಸುವ ಕಾರ್ಯ ನೆರವೇರಿಸಲಾಗುತ್ತಿದೆ.
ಈ ವೇಳೆ ಮಾತನಾಡಿದ ಹಿರಿಯ ಮುಖಂಡ, ಗ್ರಾ.ಪಂ ಮಾಜಿ ಸದಸ್ಯ ಶೇಖರಗೌಡ ಕೊರಡೂರ, ರೈತರು, ಶಿಕ್ಷಕರು ಮತ್ತು ಸೈನಿಕರು ದೇಶದ ಬೆನ್ನುಲುಬಾಗಿದ್ದು, ಅವರನ್ನು ಗೌರವ ಭಾವನೆಯಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇವರುಗಳು ಸೇವಾ ಕಾರ್ಯ ಸದಾ ಸ್ಮರಣೀಯ. ರೈತರಿಗೆ ದೊರೆಯಬೇಕಾದ ಸೌಲಭ್ಯಗಳು ಇನ್ನೂ ದೊರೆಯದಿರುವುದು ವಿಷಾದದ ಸಂಗತಿಯಾಗಿದೆ. ಅನ್ನ ನೀಡುವ ರೈತರ ಉತ್ಪನ್ನಗಳಿಗೆ ದರ ನಿಗದಿಪಡಿಸುವ ಅಧಿಕಾರ ರೈತರಿಗಿಲ್ಲ ಮತ್ತು ಅವರು ಬೆಳೆದ ಆಹಾರ ಉತ್ಪನ್ನಗಳಿಗೆ ಕಿಮ್ಮತ್ತೂ ಇಲ್ಲದಿರುವುದು ಖೇದಕರ. ಈ ನಿಟ್ಟಿನಲ್ಲಿ ಸರ್ಕಾರಗಳು ಕೃಷಿಯನ್ನು ಉದ್ಯಮದ ರೀತಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ. ರೈತ ಹುತಾತ್ಮ ದಿನದಂದು ರೈತರಿಗೆ ಸಿಗುವ ಎಲ್ಲ ಸೌಲಭ್ಯಗಳು ದೊರೆಯುವಂತಾದರೆ ಈ ಆಚರಣೆಗೆ ಹೆಚ್ಚು ಮಹತ್ವ ಬರುತ್ತದೆ ಎಂದರು.
ರೈತ ಮುಖಂಡರಾದ ನಿಂಗನಗೌಡ ಮಣಿಕಟ್ಟಿನ, ನೀಲಪ್ಪಗೌಡ ಮರಿಲಿಂಗನಗೌಡ್ರ, ಶಂಭು ತೇಲಿ, ಅಲ್ಲಿಸಾಬ ಅಗಸಿಮನಿ, ದಿವಾನಸಾಬ ಮಸೂತಿ, ನಿಂಗನಗೌಡ ಮರಿಲಿಂಗನಗೌಡ್ರ, ಅಣ್ಣಪ್ಪ ಹೊಸಮನಿ, ಶಿವಬಸಪ್ಪ ಹುಬ್ಬಳ್ಳಿ, ಲೋಹಿತ್ ಅಗಡಿ ಮುಂತಾದವರಿದ್ದರು.



