ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವುದರ ಮೂಲಕ ದೇಶವನ್ನೇ ಬಂಡವಾಳಶಾಹಿಗಳ ಕೈಗೊಪ್ಪಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಸಿಐಟಿಯು ಸಂಘಟನೆಯ ಪೀರು ರಾಠೋಡ ಆರೋಪಿಸಿದರು.
ನಗರದ ಕೆ.ಕೆ. ವೃತ್ತದಲ್ಲಿ ಸಿಐಟಿಯು ಸಂಯೋಜಿತ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಾರ್ಚ್ 3ರಿಂದ ನಡೆಯಲಿರುವ ರಾಜ್ಯಮಟ್ಟದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿಯ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸರ್ಕಾರದ ಈ ನಿರ್ಧಾರ ಕೇವಲ ಉದ್ಯಮಗಳ ಪರವಾಗಿದೆ. ಕಾರ್ಮಿಕರ ಪರವಾಗಿಲ್ಲ. ಸರ್ಕಾರ ಕಾರ್ಮಿಕರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಕಾನೂನಿನಿಂದ ಕೈಗಾರಿಕೆಗಳು ಪ್ರತಿ ಘಟಕವನ್ನು ಸ್ವತಂತ್ರ ಕಾರ್ಖಾನೆ ಎಂದು ತೋರಿಸಲು ಮತ್ತು ಯಾವುದೇ ಭಯವಿಲ್ಲದೆ ಕಾರ್ಮಿಕರನ್ನು ವಜಾಗೊಳಿಸಲು ಅನುವು ಮಾಡಿಕೊಟ್ಟಂತಾಗಿದೆ ಎಂದು ಸರ್ಕಾರದ ನೀತಿಯನ್ನು ಖಂಡಿಸಿದರು.
ಸಿಐಟಿಯ ಮುಖಂಡ ಮೆಹಬೂಬ್ ಹವಾಲ್ದಾರ್ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ಈ ಬಜೆಟ್ನಲ್ಲಿ 500 ಕೋಟಿ ರೂ ಮೀಸಲಿಡುವ ಮೂಲಕ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು. ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಿ ಅವರ ಹಿತ ಕಾಯಲು ಮುಂದಾಗಬೇಕು. ಈ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕ ಸಂಘಟನೆಗಳ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಮಟ್ಟದ ಈ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲಾಗುತ್ತಿದ್ದು, ಸಿಐಟಿಯು ಸಂಯೋಜಿತ ಸಂಘಟನೆಗಳು ಪಾಲ್ಗೊಳ್ಳುತ್ತಿವೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಈ ಹೋರಾಟಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರು, ಹೊರಗುತ್ತಿಗೆ ನೌಕರರು, ಗ್ರಾಮ ಪಂಚಾಯಿತಿ ನೌಕರರು ಪಾಲ್ಗೊಳ್ಳಲು ತಿಳಿಸಿದರು.
ಈ ವೇಳೆ ಕೃಷಿ ಕೂಲಿಕಾರರ ಸಂಘಟನೆ ಮುಖಂಡ ಬಾಲು ರಾಠೋಡ, ಅಂಬರೇಷ ಚವ್ಹಾಣ, ಅನ್ವರಭಾಷಾ ಕೊಪ್ಪಳ, ಕಳಕೇಶ ಮಾಳೋತ್ತರ, ಚನ್ನಪ ಹೂಗಾರ, ನೀಲವ್ವ ಅಜಮೀರ, ಮಾರುತಿ ಹೂಗಾರ, ರವಿಕುಮಾರ ಹೂಗಾರ, ಮುತ್ತಮ್ಮ ಹೂಗಾರ, ವೀರೇಶ ಹೂಗಾರ, ಗೌರಮ್ಮ ಹೂಗಾರ ಸೇರಿದಂತೆ ವಿವಿಧ ವಲಯದ ಮುಖಂಡರು ಪಾಲ್ಗೊಂಡಿದ್ದರು.