ಇದೇ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಶಾಸಕರ ಹಾಜರಾತಿಯನ್ನು ದಾಖಲಿಸುವ ಕೆಲಸಕ್ಕೆ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸ್ಪರ್ಶ ನೀಡಲಾಗಿದೆ. ಶಾಸಕರು ಸದನವನ್ನು ಪ್ರವೇಶಿಸುವ ಎಲ್ಲಾ ಮೂರು ಬಾಗಿಲುಗಳಲ್ಲಿ ಕೃತಕ ಎಐ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಕ್ಯಾಮರಾಗಳು ಮತ್ತು ಸದನದ ಹೊರಗೆ ಅಳವಡಿಸಲಾಗಿರುವ ಇನ್ನೊಂದು ಕ್ಯಾಮರಾವು ಶಾಸಕರು ವಿಧಾನಸೌಧ ಪ್ರವೇಶಿಸುವಾಗ ಅವರ ಮುಖಗಳನ್ನು ರೆಕಾರ್ಡ್ ಮಾಡುತ್ತದೆ ಮತ್ತು ಶಾಸಕರು ಸದನದೊಳಗೆ ಎಷ್ಟು ನಿಮಿಷ ಅಥವಾ ಗಂಟೆಗಳ ಕಾಲ ಇದ್ದರು ಎಂಬ ರಿಯಲ್ ಟೈಮ್ ದತ್ತಾಂಶವನ್ನು ನೀಡುತ್ತದೆ.
ಸೋಮವಾರ ಮುಂಗಾರು ಅಧಿವೇಶನದ ಮೊದಲ ದಿನದಂದು, ಈ ಕ್ಯಾಮರಾಗಳ ಮುಂದೆ ಫೇಸ್ ರೆಕಗ್ನಿಷನ್ ತಂತ್ರಜ್ಞಾನದಡಿ ಹಾಜರಾತಿ ದಾಖಲು ಮಾಡಿಕೊಳ್ಳಲು ಶಾಸಕರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಸದನದ ಒಳಗೆ ಮತ್ತು ಹೊರಗೆ ಇರುವ ಕ್ಯಾಮರಾಗಳಲ್ಲಿ ಶಾಸಕರು ಎಷ್ಟು ಬಾರಿ ಸದನಕ್ಕೆ ಪ್ರವೇಶಿಸಿದರು ಮತ್ತು ನಿರ್ಗಮಿಸಿದರು ಮತ್ತು ಎಷ್ಟು ಗಂಟೆ ಒಳಗೆ ಕುಳಿತರು ಎಂಬುದೂ ದಾಖಲಾಗುತ್ತದೆ. ಇಷ್ಟೇ ಅಲ್ಲದೆ, ವಿಧಾನಸೌಧದ ಪಶ್ಚಿಮ ಭಾಗದ ಪ್ರವೇಶದ್ವಾರದಲ್ಲಿ ಅನೇಕ ಕಾಮಗಾರಿಗಳನ್ನು ಮಾಡಿಸಲಾಗಿದ್ದು, ರೋಸ್ವುಡ್ನಿಂದ ಕೆತ್ತಿದ ಹೊಸ ಮುಖ್ಯ ಬಾಗಿಲನ್ನು ಸ್ಥಾಪಿಸಲಾಗಿದೆ.
ಕಾಮಗಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸೌಧದ ಪಶ್ಚಿಮ ಭಾಗದ ಪ್ರವೇಶದ್ವಾರದಿಂದ ಹೆಚ್ಚಿನ ಶಾಸಕರು ಮತ್ತು ಸಚಿವರು ಪ್ರವೇಶಿಸುತ್ತಾರೆ. ಈ ಪ್ರವೇಶದ್ವಾರದ ಹಿಂದಿನ ಲೋಹದ ಗೇಟ್ಗಳನ್ನು ರೋಸ್ವುಡ್ ಬಾಗಿಲಿನಿಂದ ಬದಲಾಯಿಸಲಾಗಿದೆ. ಪ್ರವೇಶ ದ್ವಾರದ ಪಕ್ಕದಲ್ಲಿ ಸಂವಿಧಾನದ ಪೀಠಿಕೆಯನ್ನು ಕೆತ್ತಲಾಗಿದೆ.