ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳ್ಳಲಿರುವ ‘ಕೊರಗಜ್ಜ’ ಸಿನಿಮಾ ಆರಂಭದಿಂದಲೇ ವಿಭಿನ್ನ ಕಾರಣಗಳಿಂದ ಸುದ್ದಿಯಲ್ಲಿದೆ. ನಿರ್ದೇಶಕ ಸುಧೀರ್ ಅತ್ತಾವರ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡ ಹಾಗೂ ಬಾಲಿವುಡ್ ಕಲಾವಿದರು ಅಭಿನಯಿಸಿದ್ದು, ಈಗ ಚಿತ್ರದ ಎರಡನೇ ಹಾಡು ಮತ್ತಷ್ಟು ಕುತೂಹಲ ಮೂಡಿಸಿದೆ.
ಸುಧೀರ್ ಅತ್ತಾವರ್ ಅವರ ಸಾಹಿತ್ಯಕ್ಕೆ ಗೋಪಿ ಸುಂದರ್ ಸಂಗೀತ ಸಂಯೋಜನೆ ನೀಡಿರುವ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಗೂ ಅರ್ಮಾನ್ ಮಲಿಕ್ ಹಾಡಿದ್ದಾರೆ. ವಿಶೇಷವೆಂದರೆ, ಈ ಹಾಡನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿ ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ. ಈ ಹಿಂದೆ ಲಿಯೊನಲ್ ಮೆಸ್ಸಿ ಭಾರತ ಭೇಟಿ ಹಿನ್ನೆಲೆ ಸೃಷ್ಟಿಸಿದ್ದ ಎಐ ಹಾಡಿನ ತಂಡವೇ ಇದಕ್ಕೂ ಸೃಜನಶೀಲತೆಯ ರೂವಾರಿಗಳಾಗಿದೆ.
ಚಿತ್ರದ ಶೂಟಿಂಗ್ ಸಂದರ್ಭವೂ ವಿವಾದಗಳಿಂದ ದೂರ ಉಳಿದಿಲ್ಲ. ಮಂಗಳೂರಿನ ಸೋಮೇಶ್ವರ ಕಡಲಕಿನಾರೆಯಲ್ಲಿ ಎರಡು 100 ಅಡಿ ಕ್ರೇನ್ ಹಾಗೂ ಐದು ಕ್ಯಾಮರಾಗಳ ಮೂಲಕ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದ್ದಾಗ, ರೌಡಿಗಳ ಗ್ಯಾಂಗ್ ಎರಡು ದಿನ ದಾಳಿ ನಡೆಸಿ ಚಿತ್ರತಂಡಕ್ಕೆ ಭಾರೀ ನಷ್ಟ ಉಂಟುಮಾಡಿತ್ತು. ನಂತರ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಸುಮಾರು 25 ಬೌನ್ಸರ್ಗಳನ್ನು ನೇಮಿಸಿದರೂ, ಬೆದರಿಕೆಯ ಕರೆ ಬಳಿಕ ಅವರು ಸ್ಥಳ ತೊರೆದಿದ್ದರು. ಆದರೂ ಧೃತಿಗೆಡದ ನಿರ್ಮಾಪಕರು ಪೊಲೀಸರ ಭದ್ರತೆಯಲ್ಲಿ ಮೂರನೇ ಪ್ರಯತ್ನದಲ್ಲಿ ಶೂಟಿಂಗ್ ಪೂರ್ಣಗೊಳಿಸಿದರು.
ಮೊದಲ ಹಾಡಿಗೆ ಬಂದ ಮಿಶ್ರ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ದೇವರ ಕೃಪೆ ಕುರಿತ ಆತಂಕವೂ ಎದುರಾಗಿದ್ದು, ಜ್ಯೋತಿಷ್ಯ ವಿಚಾರಣೆಯ ಬಳಿಕ ‘ಗುಳಿಗ’ ಹಾಗೂ ‘ಕೊರಗಜ್ಜ’ ದೈವಗಳ ಸಂಪೂರ್ಣ ಆಶೀರ್ವಾದ ಇದೆ ಎಂಬ ಮಾಹಿತಿ ಚಿತ್ರತಂಡ ಹಂಚಿಕೊಂಡಿದೆ. ಈ ಎಲ್ಲಾ ಘಟನೆಗಳ ನಡುವೆ ‘ಕೊರಗಜ್ಜ’ ಸಿನಿಮಾ ಜನವರಿಯಲ್ಲಿ ತೆರೆಗೆ ಬರಲಿದ್ದು, ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.



