ಕನ್ನಡ ಚಿತ್ರರಂಗದ ಖ್ಯಾತ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಸದ್ಯ ಅಜಯ್ ರಾವ್ ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಅಜಯ್ ರಾವ್ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಪತ್ನಿ ಜೊತೆಗೆ ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ದಾಖಲು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಅಜಯ್ ರಾವ್ ಅಥವಾ ಸಪ್ನಾ ಅವರು ನೀಡಿಲ್ಲ.
ಹಲವು ವರ್ಷಗಳ ಕಾಲ ಪ್ರೀತಿಸಿದ್ದ ಅಜಯ್ ರಾವ್ ಹಾಗೂ ಸಪ್ನಾ 2014 ರ ಡಿಸೆಂಬರ್ 18 ರಂದು ಹೊಸಪೇಟೆಯಲ್ಲಿ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಆರು ವರ್ಷ ವಯಸ್ಸಿನ ಚರಿಷ್ಮಾ ಹೆಸರಿನ ಮಗಳಿದ್ದಾಳೆ. ಇದೀಗ ಈ ದಂಪತಿ ನಡುವೆ ಕೌಟುಂಬಿಕ ಸಮಸ್ಯೆ ಎದುರಾಗಿದ್ದು ಸಪ್ನಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅಜಯ್ ರಾವ್ ವಿರುದ್ಧ ದೂರು ದಾಖಲಿಸಿದ್ದಾರೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 12ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಮೂಲಗಳ ಪ್ರಕಾರ ಅಜಯ್ ರಾವ್ ನಿರ್ಮಾಪಕರಾಗಲು ಹೋಗಿದ್ದೇ ಅವರ ಕೌಟುಂಬಿಕ ಕಲಹಕ್ಕೆ ಕಾರಣ ಎನ್ನಲಾಗುತ್ತಿದೆ. ‘ಎಕ್ಸ್ಕ್ಯೂಸ್ ಮೀ’ ಚಿತ್ರದಿಂದಲೂ ಕನ್ನಡ ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದ ಅಜಯ್ ರಾವ್, ಇತ್ತೀಚೆಗೆ ‘ಯುದ್ಧಕಾಂಡ’ ಚಿತ್ರವನ್ನು ನಿರ್ಮಾಣ ಮಾಡಿ, ನಾಯಕನಾಗಿಯೂ ಕಾಣಿಸಿಕೊಂಡಿದ್ದರು.ಆದ್ರೆ ಈ ಸಿನಿಮಾ ನಿರೀಕ್ಷಿತ ಮಟ್ಟದ್ದಲ್ಲಿ ಹೆಸರು ಮಾಡಿರಲಿಲ್ಲ. ಈ ಚಿತ್ರದಿಂದ ಅಜಯ್ ರಾವ್ ನಷ್ಟ ಅನುಭವಿಸಿದ್ದು, ಇದೇ ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಎನ್ನಲಾಗುತ್ತಿದೆ.