ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಾನ್ ಶಿವಶರಣೆ ಅಕ್ಕಮಹಾದೇವಿಯವರ ಆಧ್ಯಾತ್ಮಿಕ ವಚನಗಳು, ಜೀವನ ಶೈಲಿ, ಬದುಕಿನ ಅನುಭವದ ಅಮೃತ ನುಡಿಗಳು ಬದುಕಿಗೆ ದಾರಿದೀಪವಾಗಿವೆ ಎಂದು ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಲಲಿತಾ ಕೆರಿಮನಿ ಹೇಳಿದರು.
ಅವರು ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಕದಳಿ ಮಹಿಳಾ ವೇದಿಕೆಯಿಂದ ಅಕ್ಕಮಹಾದೇವಿ ಜಯಂತಿ ಆಚರಣೆ ಸಂದರ್ಭದಲ್ಲಿ ಮಾತನಾಡಿದರು.
ಸಮಾಜಿಕ ಸಮಾನತೆ, ಸ್ತ್ರೀ ಕುಲದ ಏಳಿಗೆಗಾಗಿ ಶ್ರಮಿಸಿದ ಅಕ್ಕಮಹಾದೇವಿ ಪರಮ ವೈರಾಗ್ಯ ಮೂರ್ತಿಯಾಗಿದ್ದರು. ಅಣ್ಣ ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು ಅನೇಕ ಶರಣ ಶ್ರೇಷ್ಠರ ಸಮಕಾಲೀನಳಾಗಿ, ಅವರೆಲ್ಲರ ಸಮಕ್ಕೆ ನಿಂತು ಶ್ರೇಷ್ಠ ವಚನಗಳನ್ನು ರಚಿಸಿದ ಕನ್ನಡದ ಪ್ರಥಮ ಕವಯಿತ್ರಿಯಾಗಿ ಅಕ್ಕಮಹಾದೇವಿಯರ ಹೆಸರು ಸದಾ ಚಿರಸ್ಥಾಯಿಯಾಗಿದೆ ಎಂದರು.
ತಾಲೂಕಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ನಿರ್ಮಲಾ ಅರಳಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಸಮಾನತೆ ಎಲ್ಲ ಕ್ಷೇತ್ರಗಳಲ್ಲಿ ಸಿಗಬೇಕು ಎಂದು 12ನೇ ಶತಮಾನದಲ್ಲಿಯೇ ಗಟ್ಟಿಯಾಗಿ ಬಿಂಬಿಸುವ ಕಾರ್ಯ ಮಾಡಿದ್ದಾರೆ. ಅಕ್ಕ ಮಹಾದೇವಿ ಮಹಿಳೆಯರ ಬದುಕಿನ ಆದರ್ಶವಾಗಿದ್ದಾರೆ ಎಂದರು.
ಈ ವೇಳೆ ಡಾ. ಶಕುಂತಲಾ ವಡಕಣ್ಣವರ ಸ್ತ್ರೀ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು. ಕದಳಿ ಮಹಿಳಾ ವೇದಿಕೆಯ ಹಿರಿಯ ಸದಸ್ಯರಾದ ಪ್ರತಿಮಾ ಮಾಹಜನಶೆಟ್ಟರ, ಜಯಶ್ರೀ ಮತ್ತಿಕಟ್ಟಿ, ಲತಾ ತಟ್ಟಿ, ಅಶ್ವಿನಿ ಅಂಕಲಕೋಟಿ, ನೀಲಾ ಕುಂಬಿ, ನಿರ್ಮಲಾ ವಡಕಣ್ಣವರ, ಅನ್ನಪೂರ್ಣ ಓದುನವರ, ಕಾಂಚನಾ ಹಸರೆಡ್ಡಿ, ಮೇಘಾ ಸೌದತ್ತಿ, ಅನ್ನಕ್ಕ ಯಾಳಗಿ, ಗೌರಮ್ಮ ಯಳಮಲಿ, ವಿನುತಾ ಅರಳಿ ಮುಂತಾದವರಿದ್ದರು.