ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪರಮಾತ್ಮನ ಒಲುಮೆ ಪಡೆದುಕೊಳ್ಳಲು ಹಲವಾರು ಮಾರ್ಗಗಳಿದ್ದು, ಅವುಗಳಲ್ಲಿ ತೀರ್ಥ ಕ್ಷೇತ್ರಗಳಿಗೆ ಕೈಗೊಳ್ಳುವ ಪಾದಯಾತ್ರೆ ಉತ್ತಮವಾದದ್ದು ಎಂದು ಬಾಲಲೀಲಾ ಮಾಹಾಂತ ಶಿವಯೋಗಿ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಗವಿಮಠದಲ್ಲಿ ಸತತ 50 ವರ್ಷದಿಂದ ಯಡೆಯೂರ ಶಿದ್ದಲಿಂಗೇಶ್ವರ ದೇವಸ್ಥಾನಕ್ಕೆ ತೆರಳುತ್ತಿರುವ ಸದ್ಭಾವನಾ ಪಾದಯಾತ್ರಾರ್ಥಿಗಳಿಗೆ ದಾಸೋಹ ನೆರವೇರಿಸಿ, ಸನ್ಮಾನಿಸಿ ಮಾತನಾಡಿದರು.
ಪಾದಯಾತ್ರೆಯಿಂದ ಮನಸ್ಸು ಶುದ್ಧಿಯಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ, ದೈಹಿಕ ಹಾಗೂ ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ. ಇಂತಹ ಪಾದಯಾತ್ರಿಗಳನ್ನು ಪ್ರತಿ ವರ್ಷ ಶಿವಬಸವ ಹಸಬಿ ಕುಟುಂಬ ಸತ್ಕರಿಸುತ್ತಿರುವುದು ಶ್ಲಾಘನೀಯ ಎಂದರು.
ಚಂದ್ರಶೇಖರ ಮುಳಗುಂದ ಮಾತನಾಡಿ, ದೇವರ ಬಗ್ಗೆ ಇರುವ ಭಯ-ಭಕ್ತಿ ನೀತಿ ಮಾರ್ಗದಲ್ಲಿ ಮುನ್ನಡೆಯಲು ಸ್ಫೂರ್ತಿ ನೀಡುತ್ತದೆ. ನಾವು ನಿಂತ ನೆಲ, ಕುಡಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ ದೇವರ ಕೊಡುಗೆಯಾಗಿದೆ. ಇವುಗಳನ್ನು ಕರುಣಿಸಿದ ಭಗವಂತನನ್ನು ನಾವು ಮರೆಯಬಾರದು. ವರ್ಷದಲ್ಲಿ ಒಂದು ತಿಂಗಳಾದರೂ ಅವನ ಸ್ಮರಣೆಯಲ್ಲಿ ಪಾದಯಾತ್ರೆ ಮಾಡುವುದರಿಂದ ಎಲ್ಲವೂ ಪ್ರಾಪ್ತಿಯಾಗುತ್ತದೆ ಎಂದರು.
170 ಪಾದಯಾತ್ರಿಗಳು, ಬಾಣಸಿಗರು ಹಾಗೂ 50 ವರ್ಷ ಕಾಲ ಪಾದಯಾತ್ರೆ ಮಾಡಿದವರನ್ನು ಸನ್ಮಾನಿಸಲಾಯಿತು. ಡಾ. ಎಸ್.ಸಿ. ಚವಡಿ, ಪಿ.ಎ. ವಂಟಕರ, ಅಶೋಕ ಸೋನಗೋಜಿ, ರಾಮಣ್ಣಾ ಕಮಾಜಿ, ಎಸ್.ಸಿ. ಬಡ್ನಿ, ಫಕ್ಕೀರಯ್ಯ ಅಮೋಘಿಮಠ, ಶಿವಬಸವ ಹಸಬಿ, ಬಸವರಾಜ ಬಾತಾಖಾನಿ, ಅಶೋಕ ಮೆಣಸಿನಕಾಯಿ, ಮಹೇಶ ಕೋರಿ ಇದ್ದರು.


