ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ರಾಜ್ಯದಲ್ಲಿ ಉಳಿದಿರೋದು ಜನಾಕ್ರೋಶ ಮಾತ್ರ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಪಕ್ಷದ ಕಾರ್ಯಕ್ರಮ ಮಾಡಲು ಹೋಗಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ದೇಶದ ವಿರುದ್ಧವಾಗಿ ಹೇಳಿಕೆ ನೀಡಿದ್ದರು.
ಇದನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಕಪ್ಪು ಬಟ್ಟೆ ತೋರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಯಾರೂ ಮಚ್ಚು, ದೊಣ್ಣೆ, ಎಕೆ-47 ತೆಗೆದುಕೊಂಡು ಹೋಗಿಲ್ಲ. ಪೊಲೀಸರು ಬಂಧನ ಮಾಡಿದ ಬಳಿಕ, ಕಾಂಗ್ರೆಸ್ ಗೂಂಡಾಗಳು ಅವರ ಮೇಲೆ ಮುಗಿಬಿದ್ದಿದ್ದಾರೆ.
ಇದು ಈ ಗೂಂಡಾ ಸರ್ಕಾರದ ವರ್ತನೆ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ವಿರುದ್ಧ ರಾಜ್ಯದಲ್ಲಿ ಉಳಿದಿರೋದು ಜನಾಕ್ರೋಶ ಮಾತ್ರ. ಇನ್ನು ಮುಂದೆ ಎಲ್ಲೇ ಹೋದರೂ ನಿಮ್ಮ ಪರಿಸ್ಥಿತಿ ಹೀಗೇ ಇರುತ್ತದೆ. ರಾಜ್ಯದ ಜನರು ಇದೇ ರೀತಿ ಉತ್ತರ ಕೊಡುತ್ತಾರೆ ಎಂದರು.