ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಅಲ್ಲಪ್ರಭು ದೇವರ ಮಠದ ಲಿಂಗೈಕ್ಯ ಬಸವರಾಜೇಂದ್ರ ಮಹಾಸ್ವಾಮಿಗಳ 12ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಥೋತ್ಸವವು ಸಂಭ್ರಮದಿಂದ ಜರುಗಿತು.
ಶ್ರೀ ಮಠದಿಂದ ಚೌಕಿಮಠದವರೆಗೂ ಸಾಗಿದ ರಥಕ್ಕೆ ಭಕ್ತಾಧಿಗಳು ಉತ್ತತ್ತಿ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಡೊಳ್ಳು ಮೇಳ, ಜಾಂಜ್ ಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಶ್ರೀ ಮಠದ ಸಿದ್ಧಲಿಂಗೇಶ್ವರ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಪೂರ್ವ ಅಲ್ಲಮಪ್ರಭುದೇವರ ಹಾಗೂ ಬಸವರಾಜೇಂದ್ರ ಸ್ವಾಮೀಜಿಗಳ ಗದ್ದುಗೆಗೆ ಅಭೀಷೇಕ, ವಿಶೇಷ ಪೂಜೆ ನೆರವೇರಿತು.
ನಂತರ ಹೊಸಳ್ಳಿ ಬೂದೀಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಜರುಗಿತು. ಇದಕ್ಕೂ ಪೂರ್ವ ಕಳೆದ 11 ದಿನಗಳಿಂದ ನಡೆದ ನವಲಗುಂದ ಅಜಾತ ನಾಗಲಿಂಗ ಜೀವನ ದರ್ಶನ ಪ್ರವಚನವನ್ನು ಗದಗ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣಿ ಡಾ ನೀಲಮ್ಮ ತಾಯಿ ಅವರು ಮಂಗಲಗೊಳಿಸಿದರು.
ಸುಮಂಗಲಿಯರಿಂದ ಪೂರ್ಣ ಕುಂಭ ಮೆರವಣಿಗೆಯೊಂದಿಗೆ ಅಡ್ಡಪಲ್ಲಕ್ಕಿ ಮಹೋತ್ಸವವು ಜರುಗಿತು. ಈ ಸಂದರ್ಭದಲ್ಲಿ ಆದಿಶಕ್ತಿ ಬಳಗದ ಮಹಿಳೆಯರು ಲಲಿತಾ ಸಹಸ್ರನಾಮಾವಳಿಯನ್ನು ಪಠಣ ಮಾಡಿದರು.
ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ ಕೊಟ್ಟೂರೇಶ್ವರ ಶ್ರೀಗಳು, ಹೊಸರಿತ್ತಿಯ ಗುದ್ದಲೀಶ್ವರ ಶ್ರೀಗಳು ಸಿದ್ಧಲಿಂಗೇಶ್ವರ ಶ್ರೀಗಳು ಪಾಲ್ಗೊಂಡಿದ್ದರು.