ಮಾರ್ಚ್ 1ರಿಂದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವು ಆರಂಭವಾಗಲಿದೆ. ಇದಕ್ಕಾಗಿ ಸರ್ಕಾರ ಕೋಟಿ ಕೋಟಿ ಖರ್ಚು ಮಾಡುತ್ತಿದ್ದು ಈಗಾಗಲೇ ಚಲನಚಿತ್ರೋತ್ಸವಕ್ಕೆ ಭರ್ಜರಿ ತಯಾರಿ ಶುರುವಾಗಿದೆ. ಈ ಮಧ್ಯೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿರುವ ಚಲನಚಿತ್ರಗಳ ಆಯ್ಕೆಯನ್ನು ಸರಿಯಾಗಿ ನಡೆಸಿಲ್ಲ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಬುಧವಾರ (ಫೆ.19) ತುರ್ತು ನೋಟಿಸ್ ಜಾರಿ ಮಾಡಿದೆ.
ತುಮಕೂರಿನ ಸಂವಿಧಾನ ಸಿಬಿ ಕಂಬೈನ್ಸ್ ಸೇರಿ 9 ಪ್ರತ್ಯೇಕ ಸಂಸ್ಥೆಗಳ ನಿರ್ಮಾಪಕರು ಸಲ್ಲಿಸಿರುವ ಅರ್ಜಿ ನ್ಯಾ. ಅನಂತ ರಾಮನಾಥ್ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಿ ಆರ್ ಮೋಹನ್, “ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಚಲನಚಿತ್ರಗಳನ್ನು (ಫೀಚರ್ ಫಿಲ್ಮ್) ಆಯ್ಕೆ ಮಾಡಲು ರಚಿಸಿದ್ದ ಸಮಿತಿಯು ಅರ್ಜಿದಾರರು ಸಲ್ಲಿಸಿರುವ ಚಿತ್ರಗಳನ್ನು ಕನಿಷ್ಠ ಪಕ್ಷ ವೀಕ್ಷಣೆ ಕೂಡ ಮಾಡಿಲ್ಲ” ಎಂದು ಆರೋಪ ಮಾಡಿದ್ದರು.
“ರಾಜ್ಯ ಸರಕಾರವು ಫೆ.15ರಂದು ಅಕಾಡೆಮಿಗೆ ಸಾಮಾನ್ಯ ಸಮಿತಿ ಸದಸ್ಯರನ್ನು ನೇಮಕ ಮಾಡಿದೆ. ಸದಸ್ಯರ ನೇಮಕಾತಿಗೂ ಮುನ್ನ ಸಾಕ್ಷ್ಯಚಿತ್ರಗಳನ್ನು ಆಯ್ಕೆ ಮಾಡಿರುವ ಅಧ್ಯಕ್ಷರ ನಡೆ ಪಕ್ಷಪಾತಿಯಾಗಿದ್ದು, ದುರುದ್ದೇಶಪೂರ್ವಕವಾಗಿದೆ. ಅಲ್ಲದೆ, ಸಾಮಾನ್ಯ ಸಮಿತಿಯು ಚಲಚಿತ್ರಗಳನ್ನು ವೀಕ್ಷಿಸಲು ಹೊಸದಾಗಿ ಸಮಿತಿ ರಚಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಧ್ಯಂತರ ಪರಿಹಾರದ ಭಾಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಮುಂದೂಡಬೇಕು” ಎಂದು ವಕೀಲರು ಮನವಿ ಮಾಡಿದರು.
“ಈಗಾಗಲೇ ಚಲನಚಿತ್ರೋತ್ಸವಕ್ಕೆ ಎಲ್ಲಾ ಸಿದ್ಧತೆಯಾಗಿದೆ. ಈ ಹಂತದಲ್ಲಿ ತಡೆಯಾಜ್ಞೆ ನೀಡಲಾಗದು” ಎಂದು ಹೇಳಿ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿ ಫೀಠ ಆದೇಶ ಹೊರಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನ ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸ್ಪರ್ಧಾತ್ಮಕ ವಿಭಾಗಕ್ಕೆ ಸಲ್ಲಿಕೆಯಾಗಿರುವ ಸಿನಿಮಾಗಳನ್ನು ಪೂರ್ಣವಾಗಿ ವೀಕ್ಷಿಸದೇ ತಿರಸ್ಕರಿಸಿರುವುದು ಗಂಭೀರ ಲೋಪ. ಚಿತ್ರೋತ್ಸವಕ್ಕೆ, ಸರ್ಕಾರ ಸಾರ್ವಜನಿಕರ ಹಣ ನೀಡುವುದು ಅಕಾಡೆಮಿ ಮತ್ತು ಚಿತ್ರೋತ್ಸವ ಸಮಿತಿ ತಮ್ಮ ಮನಸೋ ಇಚ್ಛೆಯಂತೆ ವರ್ತಿಸಿ, ನಿಯಮಗಳನ್ನು ಗಾಳಿಗೆ ತೂರಿ ನಡೆಸುವುದಕ್ಕಲ್ಲ. ಈ ಆರೋಪಕ್ಕೆ ಅಕಾಡೆಮಿ ಮತ್ತು ಚಿತ್ರೋತ್ಸವ ಸಮಿತಿ ವಿವರಣೆ ನೀಡಲೇಬೇಕು’ ಎಂದು ಖ್ಯಾತ ನಿರ್ದೇಶಕ ಮಂಸೋರೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.