ಆಶ್ರಯ ನಿವೇಶನ ಯೋಜನೆಯಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಕರವೇ ಆಗ್ರಹ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯಲ್ಲಿ ಬಡವರಿಗಾಗಿ ನೀಡುವ ಉದ್ದೇಶದಿಂದ ಇರುವ ಆಶ್ರಯ ನಿವೇಶನಗಳಿಗಾಗಿ ಭೂಮಿ ಖರೀದಿ ಮತ್ತು ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಈ ಕುರಿತು ಸಮಗ್ರ ತನಿಖೆ ನಡೆಸಿ ಬಡ ಜನತೆಗೆ ನಿವೇಶನಗಳು ದೊರಕುವಂತೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣಶೆಟ್ಟಿ ಬಣ)ದ ತಾಲೂಕಾಧ್ಯಕ್ಷ ಮಹೇಶ ಕಲಘಟಗಿ ಆಗ್ರಹಿಸಿದರು.

Advertisement

ಕರವೇ ವತಿಯಿಂದ ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಪುರಸಭೆ ಆಡಳಿತ ಮಂಡಳಿಯವರು ಹಲವಾರು ವರ್ಷಗಳಿಂದ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಬರುತ್ತಿದ್ದು, ಇಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದೆ. ಎಲ್ಲರೂ ಸೇರಿ ಪುರಸಭೆಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಪಟ್ಟಣದ ತಮ್ಮ-ತಿಮ್ಮಿ ಗುಡ್ಡದಲ್ಲಿ ನಿವೇಶನಕ್ಕಾಗಿ ಭೂಮಿ ಖರೀದಿಸಿದ್ದು, ಅಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಶಿಗ್ಲಿ ರಸ್ತೆಯಲ್ಲಿ 32 ಎಕರೆ 27 ಗುಂಟೆ ಜಮೀನಿನಲ್ಲಿ ಸುಮಾರು 1116 ನಿವೇಶನಗಳನ್ನು ಗುರುತಿಸಿದ್ದು, ಈ ಜಾಗ ವಾಸಕ್ಕೆ ಯೋಗ್ಯವಾಗಿಲ್ಲ. ಆದರೂ ಸಹ ಪುರಸಭೆಯ ಪ್ರಭಾವಿ ಸದಸ್ಯರ ಕೈವಾಡದಿಂದ ಇಂತಹ ಭೂಮಿಗಳನ್ನು ಖರೀದಿಸಲಾಗಿದೆ. ಇಂತಹ ಅನೇಕ ಅವ್ಯವಹಾರಗಳು ಪಟ್ಟಣದ ಪುರಸಭೆಯಲ್ಲಿ ನಡೆದಿದ್ದು, ಬಡವರಿಗೆ ನಿವೇಶನ ದೊರಕಿಸಿಕೊಡುವದಾಗಿ ಕೆಲವರು ಫಲಾನುಭವಿಗಳಿಂದ ಹಣ ಪಡೆದಿರುವ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಈ ಬಗ್ಗೆ ಕೂಡಲೇ ತನಿಖೆ ಕೈಗೊಂಡು ನಂತರ ನಿವೇಶನಗಳನ್ನು ಅರ್ಹರಿಗೆ ವಿತರಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಈಶ್ವರಗೌಡ ಪಾಟೀಲ, ಮಂಜನಗೌಡ ಪಾಟೀಲ, ವಿರೇಶ ಹಗ್ಗರದ ಹಾಜರಿದ್ದರು.

ಮಂಜುನಾಥ ಗಾಂಜಿ ಮಾತನಾಡಿ, ನಿವೇಶನ ಹಂಚಿಕೆಯಲ್ಲಿ ವಿಳಂಬ ಮಾಡುವದರ ಜೊತೆಗೆ ಪುರಸಭೆ ಕೆಲ ಸದಸ್ಯರು ಫಲಾನುಭವಿಗಳಿಂದ 25-30 ಸಾವಿರ ರೂಗಳನ್ನು ಪಡೆದುಕೊಂಡಿರುವ ಆರೋಪಗಳಿವೆ. ಕೂಡಲೇ ಈ ಕುರಿತಂತೆ ಕ್ರಮ ನಡೆಯದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here