ಮುಂಬೈನ ಖ್ಯಾತ ನಟಿ ಕಾದಂಬರಿ ಜೇತ್ವಾನಿ ಅವರಿಗೆ ಕಿರುಕುಳ ನೀಡಿದ್ದಾರೆ ಎಂಬ ಕಾರಣಕ್ಕೆ ಆಂಧ್ರಪ್ರದೇಶ ಸಿಐಡಿ ಪೊಲೀಸರು ಆಂಧ್ರಪ್ರದೇಶದ ಮಾಜಿ ಗುಪ್ತಚರ ಮುಖ್ಯಸ್ಥ ಪಿಎಸ್ಆರ್ ಆಂಜನೇಯುಲು ಅವರನ್ನು ಹೈದರಾಬಾದ್ನಲ್ಲಿ ಬಂಧಿಸಿದ್ದಾರೆ. ಆಂಜನೇಯುಲು ಅವರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಾದಂಬರಿ ಜೇತ್ವಾನಿ ಈ ಹಿಂದೆ ದೂರು ದಾಖಲಸಿಸಿದ್ದರು.
ವೈಎಸ್ಆರ್ಸಿಪಿ ಆಡಳಿತಾವಧಿಯಲ್ಲಿ ಆಂಜನೇಯುಲು ಗುಪ್ತಚರ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್ಆರ್ಸಿಪಿ ಮುಖ್ಯಸ್ಥ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರಿಗೆ ಆಪ್ತರಾಗಿದ್ದ ಆಂಜನೇಯುಲು ಅವರನ್ನು ಸದ್ಯ ಅಮಾನತುಗೊಳಿಸಲಾಗಿದೆ. ಸದ್ಯ ಆಂಜನೇಯುಲು ಅವರನ್ನು ಹೈದರಾಬಾದ್ನಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು, ನಟಿಯ ಕಿರುಕುಳ ಆರೋಪ ಪ್ರಕರಣದ ಬಗ್ಗೆ ಸಿಐಡಿ ಸಮಗ್ರ ತನಿಖೆ ನಡೆಸುತ್ತಿದೆ.
ನಟಿ ಕಾಂದಬರಿ ಅವರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಐಪಿಎಸ್ ಅಧಿಕಾರಿಗಳಾದ ಪಿಎಸ್ಆರ್ ಆಂಜನೇಯುಲು, ವಿಜಯವಾಡದ ಮಾಜಿ ಪೊಲೀಸ್ ಕಮಿಷನರ್ ಕಾಂತಿ ರಾಣಾ ಟಾಟಾ ಮತ್ತು ವಿಶಾಲ್ ಗುನ್ನಿ ಅವರನ್ನು ಅಮಾನತುಗೊಳಿಸಲಾಗಿದೆ. ಮುಂಬೈ ನಟಿಯ ವಿರುದ್ಧ ದಾಖಲಾಗಿರುವ ಅಕ್ರಮ ಪ್ರಕರಣದಲ್ಲಿ ಪಿಎಸ್ಆರ್ ಆಂಜನೇಯುಲು ಏಕಪಕ್ಷೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿಜಯವಾಡ ಮಾಜಿ ಎಸಿಪಿ ಹನುಮಂತು ರಾವ್ ಕೂಡ ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಿಕೊಂಡಿದ್ದಾರೆ.
ನಟಿಯ ವಿರುದ್ಧ ವೈಎಸ್ಆರ್ಸಿಪಿ ನಾಯಕರೊಬ್ಬರು ದೂರು ದಾಖಲಿಸಿದ ತಕ್ಷಣ ಪಿಎಸ್ಆರ್ ಆಂಜನೇಯುಲು ಅವರು ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇವರು ಪ್ರಕರಣದ ಮೇಲ್ವಿಚಾರಣೆ ವಹಿಸಿದ್ದರು, ಇದು ಅಂತಿಮವಾಗಿ ಮುಂಬೈ ನಟಿಯ ಬಂಧನ ಮತ್ತು ಕಸ್ಟಡಿಯಲ್ಲಿದ್ದಾಗ ಕಿರುಕುಳಕ್ಕೆ ಕಾರಣವಾಯಿತು ಎಂಬ ಆರೋಪವಿದೆ.
ನಟಿಯ ಆರೋಪವೇನು? 2024ರ ಫೆಬ್ರವರಿಯಲ್ಲಿ ಕೆವಿಆರ್ ವಿದ್ಯಾಸಾಗರ್ ತಮ್ಮ ಫ್ಯಾಮಿಲಿ ಮೇಲೆ ಸುಳ್ಳು ಸುಲಿಗೆ ಆರೋಪ ಹೊರಿಸಿದ್ದರು. ಅವರ ಸೂಚನೆ ಮೇರೆಗೆ ಪೊಲೀಸರು ಮುಂಬೈಗೆ ಆಗಮಿಸಿ, ಯಾವುದೇ ಮುನ್ಸೂಚನೆಯಿಲ್ಲದೇ ನಮ್ಮನ್ನು ಅರೆಸ್ಟ್ ಮಾಡಿ ವಿಜಯವಾಡಕ್ಕೆ ಕರೆತಂದು ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರು ಎಂದು ನಟಿ ಆರೋಪಿಸಿದ್ದರು. ಸುಮಾರು 40 ದಿನಗಳ ಕಾಲ ಪೊಲೀಸರ ವಶದಲ್ಲಿಡಲಾಗಿತ್ತು. ಕಾನೂನುಬಾಹಿರ ಬಂಧನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರೆಂದು ನಟಿ ಆರೋಪಿಸಿದ್ದರು. ಸೆಪ್ಟೆಂಬರ್ 13ರಂದು ನಟಿ ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣ ಸಂಬಂಧ ಇದೀಗ ಪಿಎಸ್ಆರ್ ಆಂಜನೇಯುಲು ಅವರನ್ನು ಬಂಧಿಸಲಾಗಿದೆ.