ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಬಜೆಟ್ ಪೂರ್ವಭಾವಿಯಾಗಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯಿಂದ ವಿಕಾಸ ಸೌಧದಲ್ಲಿರುವ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ರಾಜ್ ಸಿಂಗ್ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ನೀಡಿ, ಈ ಬಾರಿ ಸರ್ಕಾರದ ಬಜೇಟ್ನಲ್ಲಿ ರಾಜ್ಯದ ಕೊಳಗೇರಿಗ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ರೂ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು.
ರಾಜ್ಯದ ಸ್ಲಂ ನಿವಾಸಿಗಳ ಜನಸಂಖ್ಯೆ ಅನುಗುಣವಾಗಿ 5 ಸಾವಿರ ಕೋಟಿ ರೂ ಅನುದಾನವನ್ನು ಕೊಳಗೇರಿಗಳ ಅಭಿವೃದ್ಧಿ ಮತ್ತು ವಸತಿಗಾಗಿ ಮೀಸಲಿಡಬೇಕು. ರಾಜ್ಯದ 2816 ಕೊಳಗೇರಿ ಪ್ರದೇಶಗಳ ಮೂಲ ಸೌಕರ್ಯಗಳಿಗಾಗಿ 4 ಸಾವಿರ ಕೋಟಿ ಅನುದಾನ ಮೀಸಲಿಟ್ಟು ಸ್ಲಂ ನಿವಾಸಿಗಳ ವಸತಿ, ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಒಳಚರಂಡಿ, ಶೌಚಾಯಲಗಳು, ಸಮುದಾಯ ಭವನಗಳು, ಶಾಲಾ ಕಟ್ಡಡ ಒಳಗೊಂಡು ಸೌಲಭ್ಯಗಳನ್ನು ಒದಗಿಸಲು ಒನ್ ಟೈಮ್ ಗ್ರ್ಯಾಂಟನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಹಾಗೂ ರಾಜ್ಯ ಸಂಚಾಲಕ ಇಮ್ತಿಯಾಜ ಆರ್.ಮಾನ್ವಿ, ರಾಜ್ಯ ಸಂಘಟನಾ ಸಂಚಾಲಕ ಜನಾರ್ಧನ ಹಳ್ಳಿಬೆಂಚಿ, ರಾಜ್ಯ ಮಹಿಳಾ ಸಂಚಾಲಕಿ ಚಂದ್ರಮ್ಮ, ರೇಣುಕಾ ಸರಡಗಿ, ವೆಂಕಮ್ಮ, ಮಂಜುಬಾಯಿ, ರೇಣುಕಾ ಯಲ್ಲಮ್ಮ, ಅರುಣ ಟಿ, ಹನುಮಂತ, ಸುಧಾ ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಮಾಜಿಕ ಅಸಮಾನತೆಯ ಭಾಗವಾದ ಸ್ಲಂ ಜನರ ಆರ್ಥಿಕ ಅಭಿವೃದ್ಧಿಗೆ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಬೇಕು. ಜನವರಿ 16-2025ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ರಾಜ್ಯದಲ್ಲಿ ಬಾಕಿ ಉಳಿದಿರುವ 61,894 ಮನೆಗಳ ನಿರ್ಮಾಣ ಪೂರ್ಣಗೊಳಿಸಲು ಹಣವನ್ನು ಬಿಡುಗಡೆ ಮಾಡಿ ತುರ್ತು ಕ್ರಮ ಕೈಗೊಂಡು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ವಸತಿ ಯೋಜನೆಯ ಫಲಾನುಭವಿಗಳ ಶುಲ್ಕವನ್ನು 25 ಸಾವಿರ ರೂಗಳಿಗೆ ಇಳಿಕೆ ಮಾಡಲು ಪ್ರಸಕ್ತ ಬಜೆಟ್ನಲ್ಲಿ ಘೋಷಣೆ ಮಾಡಬೇಕೆಂದು ಮನವಿಯ ಮೂಲಕ ಒತ್ತಾಯಿಸಿದರು.