ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಬೆಂಗಳೂರು ನಂತರ ಗದಗ ಜಿಲ್ಲೆ ಸೇರಿ ಪಟ್ಟಣದಲ್ಲಿ `ಥರ್ಡ್ ಐ’ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಲು ಮುಂದಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸೋಮವಾರ ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ `ಥರ್ಡ್ ಐ’ ಸಿಸಿ ಕ್ಯಾಮರಾಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಗಳು ಜಾರಿಗೆ ತರುವ ಪ್ರತಿ ಕಾನೂನು ಹಾಗೂ ಯೋಜನೆಗಳಲ್ಲಿ ಜನರ ಸುರಕ್ಷತೆ ಜತೆಗೆ ಅಭಿವೃದ್ಧಿಯನ್ನು ಬಯಸುತ್ತವೆ. ಹೀಗಾಗಿ ಜನತೆ ಯೋಜನೆಗಳ ಲಾಭವನ್ನು ಪಡೆಯಲು ತೋರುವ ಹಿತಾಸಕ್ತಿಯನ್ನು ಕಾನೂನು ಪಾಲನೆಯಲ್ಲಿಯೂ ತೋರಬೇಕು. ಸಂಚಾರ ನಿಯಮಗಳು ವಾಹನ ಸಾವರರ ಹಿತವನ್ನು ಕಾಪಾಡುವುದರೊಂದಿಗೆ ಪಾದಾಚಾರಿಗಳ ಜೀವ ರಕ್ಷಣೆಗೂ ಸಹಕಾರಿಯಾಗಿರುತ್ತವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಸಿಪಿಐ ಎಸ್.ಎಸ್. ಬೀಳಗಿ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ಮುರ್ತುಜಾ ಡಾಲಾಯತ್, ವೆಂಕಟೇಶ ಮುದಗಲ್, ಉಮೇಶ ರಾಠೋಡ, ಅಶೋಕ ಬಾಗಮಾರ, ಸಿದ್ದಣ್ಣ ಬಂಡಿ, ಎಚ್.ಎಸ್. ಸೋಂಪುರ, ಎ.ಡಿ. ಕೋಲಕಾರ, ಶ್ರೀಧರ ಬಿದರಳ್ಳಿ, ಅರಿಹಂತ ಬಾಗಮಾರ, ಶರಣಪ್ಪ ಚಳಗೇರಿ, ಪಿಎಸ್ಐ ಸೋಮನಗೌಡ ಗೌಡ್ರ, ಉಮೇಶ ಲಮಾಣಿ, ರಾಘವೇಂದ್ರ ಮುಂತಾದವರಿದ್ದರು.
ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಕೆ, ಹೆಲ್ಮೆಟ್ ಧರಿಸುವುದು ಹಾಗೂ ಬೆಲ್ಟ್ ಹಾಕಿಕೊಳ್ಳುವುದು ಜೀವ ರಕ್ಷಣೆಗೆ ಸಹಾಯಕವಾಗಿದೆ. ಜನತೆ ಕಾನೂನುಗಳನ್ನು ಪಾಲನೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು ಎಂದ ಶಾಸಕ ಜಿ.ಎಸ್. ಪಾಟೀಲ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಪ್ರತಿ ಕುಟುಂಬವನ್ನು ತಲುಪಿದ್ದು, ಜನತೆ ಕಾಂಗ್ರೆಸ್ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಪರಿಣಾಮ, ಜನರ ವಿಶ್ವಾಸಗಳಿಸಿರುವ ಕಾಂಗ್ರೆಸ್ನ ಜನಪ್ರಿಯತೆ ಸಹಿಸಿಕೊಳ್ಳದ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ಸೇರಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ವಿಪರ್ಯಾಸ ಎಂದರು.