ವಿಜಯಸಾಕ್ಷಿ ಸುದ್ದಿ, ಗದಗ: ಸರ್ವ ಜನಾಂಗವನ್ನು ಸಮದೃಷ್ಟಿಯಿಂದ ನೋಡುವ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿಕೊಟ್ಟರು. ಜೊತೆಗೆ ನಮ್ಮ ಕರ್ತವ್ಯಗಳನ್ನೂ ನಮಗೆ ಸೂಚಿಸಿದರು. ಅವರ ಆದರ್ಶಗಳ ಪಾಲನೆ ಅತ್ಯವಶ್ಯ. ಅದೇ ರೀತಿ ಬಾಬು ಜಗಜೀವನರಾಮ ಅವರು ಹೊಂದಿದ ಸಂಸ್ಕೃತ ಪಾಂಡಿತ್ಯ ಮೆಚ್ಚುವಂತದ್ದು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಗದಗ-ಬೆಟಗೇರಿ ನಗರಸಭೆ ಹಾಗೂ ಗದಗ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ, ರಾಷ್ಟç ನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 118ನೇ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲಾಗಿದೆ. ಆದರೆ ಸಾಮಾಜಿಕ ಅಸ್ಪೃಶ್ಯತೆ ಇನ್ನೂ ಬೇರೂರಿದೆ. ಗ್ರಾಮಗಳಲ್ಲಿ ಈ ಪರಿಸ್ಥಿತಿ ಇನ್ನೂ ಇದೆ. ಸಾಮಾಜಿಕ ತೀವ್ರ ಸುಧಾರಣೆ ಪ್ರಸ್ತುತ ಅತ್ಯಂತ ಅವಶ್ಯವಿದೆ. ಸುಧಾರಣೆಗೆ ಹೋರಾಟ ಅವಶ್ಯವಿದೆ. ಆರ್ಥಿಕ ಸುಧಾರಣೆಗೂ ಪ್ರಾಮುಖ್ಯತೆ ನೀಡಬೇಕು ಎಂದರು.
ಹಿಂದುಳಿದ ಸಮುದಾಯಕ್ಕೆ ಸರ್ಕಾರ ಅನೇಕ ಸೌಲಭ್ಯ ನೀಡಿದೆ. ಶಿಕ್ಷಣ, ಪುಸ್ತಕ, ವಸತಿಗೆ ಶುಲ್ಕಗಳನ್ನು ನೀವು ನೀಡುವಂತಿಲ್ಲ. ವಿದ್ಯಾರ್ಥಿ ವೇತನ ಸರ್ಕಾರ ನೀಡುತ್ತದೆ. ಎಲ್ಲ ಸೌಲಭ್ಯ ಪಡೆದು ಮಕ್ಕಳನ್ನು ಆಸ್ತಿಯನ್ನಾಗಿಸಿಬೇಕು. ನಿಮ್ಮ ಬೆಳವಣಿಗೆ ನಿವೇ ಕಾರಣರಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರು ತಮ್ಮ ವೈಯಕ್ತಿಕ ಅಭಿವೃದ್ಧಿಗೆ ಬದುಕದೇ ಸಾಮಾಜಿಕ ಅಭಿವೃದ್ಧಿಗೆ ಬದುಕಿದವರು. ಈ ಇಬ್ಬರು ಮಹನೀಯರು ಲಕ್ಷ್ಮೀ ಪುತ್ರರಲ್ಲ, ಸರಸ್ವತಿ ಪುತ್ರರಾಗಿದ್ದರು ಎಂದರು.
ಅಂಬೇಡ್ಕರ್ ಅವರ ಸಾಧನೆ ಪರಿಗಣಿಸಿ ಅಂದಿನ ಪ್ರಧಾನಿ ವಾಜಪೇಯಿ ಅವರು ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಅದೇ ರೀತಿ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 5 ಕ್ಷೇತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪಂಚ ತೀರ್ಥ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸಿದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರರ ಕುರಿತಾರ ಕವಿತೆಗಳ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಕವನ ಸಂಕಲನದ ಸಂಪಾದಕ ಮಂಡಳಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸೃಷ್ಟಿ ಜನಪದ ಕಲಾತಂಡದ ರಮೇಶ ಕಾಳೆ ಹಾಗೂ ದಲಿತಾ ಕಲಾ ಮಂಡಳಿಯ ಶರೀಷ್ ಬಿಳಿಯಲಿ ಹಾಗೂ ಸಂಗಡಿಗರು ಗೀತೆಗಳನ್ನು ಹಾಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋತದಾರ ಭೀಮ ಗೀತೆ ಹಾಡಿದರು.
ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಡಾ. ಪ್ರಶಾಂತ ಜೆ.ಸಿ ಡಾ. ಬಿ.ಆರ್.ಅಂಬೇಡ್ಕರ ಕುರಿತು ಉಪನ್ಯಾಸ ನೀಡಿದರು. ನಿವೃತ್ತ ಪ್ರಾಚಾರ್ಯ ಪ್ರೊ. ಡಿ.ಜಿ. ಜೋಗಣ್ಣನವರ ಹಾಗೂ ನಿವೃತ್ತ ಉಪನ್ಯಾಸಕ ಪ್ರೊ. ಸತೀಶ ಪಾಸಿ ಅವರುಗಳು ಡಾ. ಬಾಬು ಜಗಜೀವನರಾಂ ಕುರಿತು ಉಪನ್ಯಾಸ ನೀಡಿದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಎಸ್.ಎನ್. ಬಳ್ಳಾರಿ, ಕೃಷ್ಣ ಪರಾಪೂರ, ಬಸವರಾಜ ಕಡೇಮನಿ, ದುರ್ಗೇಶ್ ವಿಭೂತಿ, ಮಾರ್ತಾಂಡಪ್ಪ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಾದ ರಾಜಾರಾಮ ಎಸ್.ಪವಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ. ರವಿ ಗುಂಜೀಕರ, ಉಪವಿಭಾಗಾಧಿಕಾರಿ ಗಂಗಪ್ಪ ಸೇರಿದಂತೆ ಇತರರು ಇದ್ದರು.
ಭಾವಚಿತ್ರ ಮೆರವಣಿಗೆ
ಡಾ. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರಗಳ ಮೆರಣಿಗೆಯು ಗದಗ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆಯೊಂದಿಗೆ ಪ್ರಾರಂಭಗೊಂಡು ಮಹಾತ್ಮ ಗಾಂಧಿ ಸರ್ಕಲ್, ಮಹೇಂದ್ರಕರ ಸರ್ಕಲ್, ಟಾಂಗಾ ಕೂಟ್, ಬಸವೇಶ್ವರ ಸರ್ಕಲ್, ಗುಜ್ಜರಬಸ್ತಿ, ಮುಳಗುಂದ ನಾಕಾ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಭವನ ತಲುಪಿತು.
“ಭಾರತ ದೇಶದ ಸುತ್ತಮುತ್ತಲಿನ ದೇಶಗಳಲ್ಲಿ ಅಭದ್ರತೆ ಮೂಡಿದೆ. ಎಲ್ಲ ದೇಶಗಳು ಸಾಮಾಜಿಕ, ಆರ್ಥಿಕವಾಗಿ ದಿವಾಳಿಯಾಗಿ ಹೋಗಿವೆ. ಆದರೆ ಭಾರತ ದೇಶದಲ್ಲಿ ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನ ಇರುವ ಕಾರಣ ಸುಭದ್ರವಾಗಿದೆ. ಇಂಧಿರಾ ಗಾಂಧಿ ಅವರ ಹತ್ಯೆ ನಂತರರೂ ಅಧಿಕಾರ ಹಸ್ತಾಂತರದಲ್ಲಿ ತೊಂದರೆ ಆಗಲಿಲ್ಲ. ಅದಕ್ಕೆ ಗಟ್ಟಿ ಪ್ರಜಾಪ್ರಭುತ್ವವೇ ಕಾರಣ”
– ಡಾ. ಎಚ್.ಕೆ. ಪಾಟೀಲ.
ಕಾನೂನು, ಪ್ರವಾಸೋದ್ಯಮ ಸಚಿವರು.