ಛತ್ತೀಸ್ಗಢ: ಮಾವೋವಾದಿ ಸಂಘಟನೆಗಳಲ್ಲಿ ತೊಡಗಿರುವ ಮಹಿಳೆಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ಛತ್ತೀಸ್ಗಢದ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಶಾಂತಿ ಮತ್ತು ಅಭಿವೃದ್ಧಿ ಮರುಸ್ಥಾಪನೆ ಅಗತ್ಯವಿದೆ ಎಂದು ಹೇಳಿದ್ದಾರೆ.
ರಾಯ್ಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಕೇಂದ್ರ ಮತ್ತು ಛತ್ತೀಸ್ಗಢ ಸರ್ಕಾರ ಯಾರ ಮೇಲೂ ಒಂದೇ ಒಂದು ಗುಂಡು ಹಾರಿಸಲು ಬಯಸುವುದಿಲ್ಲ. ಶರಣಾಗುವ ಮಾವೋವಾದಿಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.
ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗುವ ಮಾವೋವಾದಿಗಳಿಗೆ ರತ್ನಗಂಬಳಿ ಹಾಸಲಾಗುತ್ತದೆ. ಅವರ ಪುನರ್ವಸತಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಸರ್ಕಾರ ಒದಗಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಕೈಯಲ್ಲಿ ಬಂದೂಕು ಹಿಡಿದು ನಿಂತಿರುವ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, “ದಯವಿಟ್ಟು ಹಿಂಸಾಚಾರದ ದಾರಿಯನ್ನು ತ್ಯಜಿಸಿ ಈಗಲೇ ಶರಣಾಗಿ. ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಿಮ್ಮಿಗಾಗಿ ಉತ್ತಮ, ಗೌರವಾನ್ವಿತ ಜೀವನ ಕಾಯುತ್ತಿದೆ” ಎಂದು ಭಾವನಾತ್ಮಕವಾಗಿ ಮನವಿ ಮಾಡಿದರು.
ಶರಣಾದ ಮಹಿಳಾ ಮಾವೋವಾದಿಗಳಿಗೆ ಶಿಕ್ಷಣ, ಭದ್ರತೆ ಮತ್ತು ಗೌರವಯುತ ಜೀವನದೊಂದಿಗೆ ಸಮಾಜದಲ್ಲಿ ಪುನರ್ವಸತಿ ಕಲ್ಪಿಸಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದರು. ಮಾವೋವಾದಿ ಸಿದ್ಧಾಂತಗಳು ಕಳೆದ ನಾಲ್ಕೂವರೆ ದಶಕಗಳಿಂದ ಅಭಿವೃದ್ಧಿಯ ಹಾದಿಗೆ ಅಡ್ಡಿಯಾಗಿವೆ.
ಬಸ್ತಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮಾವೋವಾದಿಗಳ ಭೀತಿಯಿಂದ ಅಭಿವೃದ್ಧಿಯಿಂದ ಹಿಂದುಳಿದಿವೆ. ಶಾಲೆಗಳನ್ನು ಸುಟ್ಟು ಹಾಕುವ ಮೂಲಕ ಹೊಸ ಪೀಳಿಗೆಯನ್ನು ಅನಕ್ಷರಸ್ಥರನ್ನಾಗಿ ಮಾಡಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದರು.



