ಹಾವೇರಿ:- ಕಾರಿನ ಗಾಜು ಒಡೆದು 33 ಸೆಕೆಂಡ್ನಲ್ಲಿ 33 ಲಕ್ಷ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಓಜಿ ಕುಪ್ಪಂ ಗ್ಯಾಂಗ್ ಕೈವಾಡ ಇರೋದು ಬೆಳಕಿಗೆ ಬಂದಿದೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಪೊಲೀಸರು, ಓಜಿ ಕುಪ್ಪಂ ಗ್ಯಾಂಗ್ ನ ಓರ್ವನನ್ನು ಅರೆಸ್ಟ್ ಮಾಡಿದ್ದಾರೆ. ಎಜಿ ಜಗದೀಶ್ ಬಂಧಿತ ಆರೋಪಿ. ಕಳೆದ ನಾಲ್ಕು ದಿನಗಳ ಹಿಂದೆ ಕಾರಿನ ಗಾಜು ಒಡೆದು 33 ಲಕ್ಷ ಹಣ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಕಳ್ಳರ ಕೈಚಳಕದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಆರೋಪಿಯಿಂದ 30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಸಿವಿಲ್ ಕಾಂಟ್ರ್ಯಾಕ್ಟರ್ ಸಂತೋಷ್ ಹಾವೇರಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೈನಂದಿನ ವ್ಯವಹಾರಕ್ಕಾಗಿ 33 ಲಕ್ಷ ರೂ. ಹಣವನ್ನು ಸಂಬಂಧಿಕರ ಖಾತೆಯಿಂದ ಚೆಕ್ ಮುಖಾಂತರ ಡ್ರಾ ಮಾಡಿಕೊಂಡಿದ್ದರು. ಡ್ರಾ ಮಾಡಿದ ಹಣವನ್ನು ಕಾರಿನ ಹಿಂಭಾಗದ ಸೀಟಿನಲ್ಲಿಟ್ಟಿದ್ದರು.
ಇದನ್ನು ನೋಡಿದ ಆರೋಪಿಗಳು, ಯೂನಿಯನ್ ಬ್ಯಾಂಕ್ ನಿಂದ ಫಾಲೋ ಮಾಡಿ ಬಸವೇಶ್ವರ ನಗರದಲ್ಲಿ ಕೃತ್ಯ ಎಸಗಿದ್ದಾರೆ. ಬಳಿಕ ಟೋಲ್ ಗೇಟ್ ತಪ್ಪಿಸಿ ಕಳ್ಳರ ಗ್ಯಾಂಗ್ ಬೆಂಗಳೂರು ಸೇರಿದ್ದಾರೆ. ಆ ಬಳಿಕ ಬೆಂಗಳೂರಿನಿಂದ ಆಂಧ್ರಪ್ರದೇಶದ ಗೆ ಗ್ಯಾಂಗ್ ತೆರಳಿದ್ದು, ಮಾಹಿತಿ ಆಧರಿಸಿದ ಹಾವೇರಿ ಪೊಲೀಸರು, ಆಂದ್ರಪ್ರದೇಶದ ಓಜಿ ಕುಪ್ಪಂ ಗ್ರಾಮದಲ್ಲೇ ಓರ್ವನನ್ನು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.