ಕಾಂಗ್ರೆಸ್‌ನಿಂದ ಭಾವನಾತ್ಮಕವಾಗಿ ಸೆಳೆಯುವ ತಂತ್ರ : ಬೊಮ್ಮಾಯಿ

0
haveri
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ : ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುವುದನ್ನು ಬಿಡಬೇಕು. ಚುನಾವಣಾ ನೀತಿ ಸಂಹಿತೆ ಜಾರಿಯಲಿದ್ದರೂ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು ರಾಜ್ಯಕ್ಕೆ ಬರ ಪರಿಹಾರ ನೀಡಿರುವುದು, ರಾಜ್ಯದ ರೈತರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇರುವ ಕಾಳಜಿ ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಈ ಕುರಿತು ಶನಿವಾರ ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ಪಡೆಯಲು ಇರುವ ನಿಯಮಗಳನ್ನು ರಾಜ್ಯ ಸರಕಾರದವರು ಸರಿಯಾಗಿ ಪಾಲನೆ ಮಾಡಲಿಲ್ಲ. ಅದರಲ್ಲಿ ರಾಜಕಾರಣ ಮಾಡುತ್ತ ಕಾಲಹರಣ ಮಾಡಿದರು. ಕೇಂದ್ರ ಸರಕಾರ ಯಾವತ್ತೂ ಪರಿಹಾರ ಕೊಡುವುದಿಲ್ಲ ಎಂದು ಹೇಳಿಲ್ಲ. ಇವರು ಪರಿಹಾರ ಕೊಡಲು ಕೇಳಬೇಕಾದ ರೀತಿಯಲ್ಲಿ ಕೇಳಿಲ್ಲ. ಆದರೂ ಕೇಂದ್ರ ಸರ್ಕಾರ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಆಯೋಗದ ಅನುಮತಿ ಪಡೆದು ಬರ ಪರಿಹಾರ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯ ಸರಕಾರ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.

ಕಾಂಗ್ರೆಸ್‌ನವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಕೊನೆಯ ಅಸ್ತ್ರವಾಗಿ ಭಾವನಾತ್ಮಕವಾಗಿ ಸೆಳೆಯುವ ತಂತ್ರ ಮಾಡುತ್ತಿದ್ದು, ದಲಿತರಿಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಯಾರೇ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಕಾಂಗ್ರೆಸ್‌ನವರು ಅದರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಶಾಸಕ ಶ್ರೀನಿವಾಸ ಮಾನೆ ಹಾನಗಲ್ ಕ್ಷೇತ್ರಕ್ಕೆ ಬೊಮ್ಮಾಯಿಯವರ ಕೊಡುಗೆ ಏನು ಎಂದು ಮಾಡಿರುವ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದನ್ನು ಹಾನಗಲ್ ಕ್ಷೇತ್ರದ ಜನತೆ ಕೇಳಲಿ, ಶ್ರೀನಿವಾಸ ಮಾನೆ ಹಾನಗಲ್‌ನಲ್ಲೇ ಇರುತ್ತಾರೆ. ಅಲ್ಲಿನ ಜನರನ್ನೇ ಕೇಳಲಿ, 600 ಕೋಟಿ ವೆಚ್ಚದಲ್ಲಿ ಮೂರು ಏತ ನೀರಾವರಿ ಮಾಡಿದ್ದು ಯಾರು ಎಂದು ತಿಳಿದುಕೊಳ್ಳಲಿ. ತಿಳುವಳ್ಳಿ ಏತ ನೀರಾವರಿ, ಧರ್ಮಾ ಕಾಲುವೆ ಆಧುನೀಕರಣ ಮಾಡಿದಾಗ ಜಲಸಂಪನ್ಮೂಲ ಸಚಿವರು ಯಾರಿದ್ದರು ಎಂಬುದನ್ನು ಮಾನೆಯವರು ತಿಳಿದುಕೊಳ್ಳಲಿ. ಅವರ ಸಾಧನೆ ಹೇಳಿಕೊಳ್ಳಲು ಅವರ ಬಳಿ ಏನೂ ಇಲ್ಲ ಎಂದರು.


Spread the love

LEAVE A REPLY

Please enter your comment!
Please enter your name here