ವಿಜಯಸಾಕ್ಷಿ ಸುದ್ದಿ, ಗದಗ : ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯು ಜನರ ಬದುಕು-ಭಾವನೆಗಳ ನಡುವಿನ ಚುನಾವಣೆಯಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ 35ನೇ ವಾರ್ಡಿನ ಶ್ರೀರಾಮ ನಗರದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ ಚುನಾವಣೆಗಳಲ್ಲೂ ಮಹಿಳೆಯರು ದೂರ ಉಳಿಯುತ್ತಿದ್ದರು. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಪಂಚ ಗ್ಯಾರಂಟಿಗಳನ್ನು ಬೆಂಬಲಿಸಿ ಇಷ್ಟೊಂದು ಪ್ರಮಾಣದಲ್ಲಿ ಮಹಿಳೆಯರು ಸೇರಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ ಎಂದರು.
ಗ್ಯಾರಂಟಿ ಯೋಜನೆ ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು. ಆದರೆ, 20 ಲಕ್ಷ ಕೋಟಿ ಶ್ರೀಮಂತರ ಸಾಲವನ್ನು ಮನ್ನಾ ಮಾಡಿದರು. ಆವಾಗ ದಿವಾಳಿಯಾಗದ ದೇಶ, ಬಡವರಿಗೆ 58 ಸಾವಿರ ಕೋಟಿ ಹಣ ನೀಡಿದರೆ ಹೇಗೆ ದಿವಾಳಿಯಾಗುತ್ತದೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ನಗರಸಭೆ ನಾಮನಿರ್ದೇಶಿತ ಸದಸ್ಯ ದುರಗೇಶ ವಿಭೂತಿ, ಮುಖಂಡರಾದ ಡಾ. ಮ್ಯಾಗೇರಿ, ಅನಿಲ ಗರಗ, ಗೂರಪ್ಪ ಕಲ್ಯಾಣದವರ, ಹುಸೇನಪ್ಪ ಗಡ್ಡದವರ, ಕಂಠೆಪ್ಪ ವಿಭೂತಿ, ಯಲ್ಲಪ್ಪ ವಿಭೂತಿ, ಮೋಹನ ಭಜಂತ್ರಿ, ಹನಂತಪ್ಪ ಗರಗ, ಹನಂತಪ್ಪ ಕಕ್ಕೇರಿ ಸೇರಿ ಹಲವರು ಇದ್ದರು.