ಪಾಟ್ನಾ: ಕೋರ್ಟ್ ಅನುಮತಿಯೊಂದಿಗೆ ಜೈಲಿನಿಂದ ಹೊರಬಂದ ಜೆಡಿಯು ಮುಖಂಡ ಮೊಕಾಮಾ ಅನಂತ್ ಸಿಂಗ್ ಅವರು ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅನಂತ್ ಸಿಂಗ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ದುಲಾರ್ಚಂದ್ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತ್ ಸಿಂಗ್ ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲು ಮಾತ್ರ ಪಾಟ್ನಾ ಸಿವಿಲ್ ನ್ಯಾಯಾಲಯವು ಅವರಿಗೆ ತಾತ್ಕಾಲಿಕ ಅನುಮತಿ ನೀಡಿತ್ತು. ಜಾಮೀನು ಇನ್ನೂ ಅನುಮೋದನೆಯಾಗದ ಹಿನ್ನೆಲೆಯಲ್ಲಿ, ವಿಧಾನಸಭಾ ಕಲಾಪ ಮುಗಿದ ಕೂಡಲೇ ಅವರು ಮತ್ತೆ ಬೇವೂರ್ ಜೈಲಿಗೆ ಮರಳಬೇಕಾಗಿದೆ.
ಸಾಂವಿಧಾನಿಕ ನಿಯಮಾವಳಿಗಳ ಪ್ರಕಾರ, ಶಾಸಕರೊಬ್ಬರು ಸದನದಲ್ಲಿ ಭಾಗವಹಿಸುವುದನ್ನು 188ನೇ ವಿಧಿ ಕಡ್ಡಾಯಗೊಳಿಸಿದ್ದು, ಪ್ರಮಾಣ ವಚನ ಸ್ವೀಕರಿಸದೇ ಕಾರ್ಯನಿರ್ವಹಿಸುವುದನ್ನು 193ನೇ ವಿಧಿ ನಿಷೇಧಿಸುತ್ತದೆ. ಈ ಹಿನ್ನೆಲೆ, ಸಿಂಗ್ ಅವರಿಗೆ ಸದನದಲ್ಲಿ ಹಾಜರಾಗಲು ಕಾನೂನುಬದ್ಧ ಅವಕಾಶ ನೀಡಲಾಗಿತ್ತು.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅನಂತ್ ಸಿಂಗ್ ಅವರು, “ನಾನು ನಿರಪರಾಧಿ. ನನಗೆ ನ್ಯಾಯ ಸಿಗುತ್ತದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಧಾನಸಭೆ ಆವರಣದಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಸಿಸಿಟಿವಿ ಕಣ್ಗಾವಲು, ತ್ವರಿತ ಪ್ರತಿಕ್ರಿಯೆ ಪಡೆಗಳು ಹಾಗೂ ಬೆಂಗಾವಲು ವಾಹನಗಳನ್ನು ನಿಯೋಜಿಸಲಾಗಿತ್ತು.
ಬೆಂಬಲಿಗರ ಸಭೆಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಯಿತು. ಅಕ್ಟೋಬರ್ನಲ್ಲಿ ನಡೆದ ಚುನಾವಣೆಯಲ್ಲಿ ಅನಂತ್ ಸಿಂಗ್ ಅವರು ಆರ್ಜೆಡಿಯ ವೀಣಾ ದೇವಿ ಅವರನ್ನು 28,206 ಮತಗಳ ಅಂತರದಿಂದ ಸೋಲಿಸಿ ನಿರ್ಣಾಯಕ ಜಯ ಸಾಧಿಸಿದ್ದರು.



