ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರಾಚೀನ ಕಾಲದ ದೇವಾಲಯಗಳು, ಶಾಸನಗಳಾದಿಯಾಗಿ ಅನೇಕ ಸ್ಮಾರಕಗಳು ಭಾರತೀಯ ಸಂಸ್ಕೃತಿಯ ರಾಯಭಾರಿಗಳಾಗಿವೆ ಎಂದು ಪ್ರಾ. ಆರ್.ಎಂ. ಕಲ್ಲನಗೌಡರ ಹೇಳಿದರು.
ಅವರು ಪಟ್ಟಣದ ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಐತಿಹಾಸಿಕ ಶಿದ್ದೇಶ್ವರ ದೇವಾಲಯದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನಲ್ಲಿ ಭಾರತ ಹೆಚ್ಚು ಪ್ರಾಚೀನ ಸ್ಮಾರಕಗಳನ್ನು ಹೊಂದಿರುವ ದೇಶವಾಗಿದ್ದು, ಪ್ರತಿ ಹಳ್ಳಿಗಳಲ್ಲಿ, ಪಟ್ಟಣ ಪ್ರದೇಶಗಳಲ್ಲಿ ವೈಶಿಷ್ಟ್ಯ ಪೂರ್ಣವಾದ ಅನೇಕ ಪ್ರಾಚೀನ ಸ್ಮಾರಕಗಳಿವೆ. ಅವುಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳು ಸ್ಮಾರಕಗಳ ಬಗ್ಗೆ ಹೆಚ್ಚು ಅಭ್ಯಾಸದ ಜೊತೆಯಲ್ಲಿ ಅವುಗಳ ಸಂರಕ್ಷಣೆಯ ಹೊಣೆಗಾರಿಕೆ ಹೊಂದಬೇಕು ಎಂದರು.
ಪ್ರಾಧ್ಯಾಪಕರಾದ ಮಾರುತಿ ಹಾಗೂ ಕೆ.ಎಂ. ಶಿರೂರ ಐತಿಹಾಸಿಕ ಸ್ಮಾರಕಗಳ ಇತಿಹಾಸ ಹಾಗೂ ಅವುಗಳ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು.