ಬೆಂಗಳೂರು:-ಬಿಗ್ ಬಾಸ್ ವಿಷಯದಲ್ಲಿ ಸರ್ಕಾರ ಸುದೀಪ್ರನ್ನ ಟಾರ್ಗೆಟ್ ಮಾಡಿದ್ದಾರೆ ಎಂಬ ಛಲವಾದಿ ನಾರಾಯಣಸ್ವಾಮಿ ಆರೋಪಕ್ಕೆ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಪ್ರಬುದ್ಧ ವಿರೋಧ ಪಕ್ಷದ ನಾಯಕ ಅಂದರೆ ಛಲವಾದಿ ನಾರಾಯಣಸ್ವಾಮಿ. ಸರ್ಕಾರ ಸುದೀಪ್ ಅವರನ್ನ ಟಾರ್ಗೆಟ್ ಮಾಡ್ತಿದೆ ಅಂತ ಮಾತನಾಡುತ್ತಾರೆ.
ನಾವು ಯಾಕೆ ಅವರನ್ನ ಟಾರ್ಗೆಟ್ ಮಾಡೋಣ. ಸುದೀಪ್ ಸರ್ ಅಂದರೆ ನಮಗೆ ಬಿಜೆಪಿ ಅವರಿಗಿಂತ ಹೆಚ್ಚು ಗೌರವ, ಪ್ರೀತಿ. ಬಿಗ್ ಬಾಸ್ ವಿಚಾರ ಕಮ್ಯುನಿಕೇಶನ್ ಸಮಸ್ಯೆಯಿಂದ ಆಗಿತ್ತು. ಈಗ ಡಿಕೆ ಸಾಹೇಬ್ರು ಸರಿ ಮಾಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಅವರು ಲಿಂಗಾಯತರನ್ನ ಟಾರ್ಗೆಟ್ ಮಾಡಿದ್ದಾರೆ. ಹಿಂದುಳಿದ, ದಲಿತರನ್ನ ಬಿಜೆಪಿ ಟಾರ್ಗೆಟ್ ಮಾಡಿದೆ. ಛಲವಾದಿ ಅವರೇ ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಇಳಿಸಿದ್ದಾಗ ಎಲ್ಲಿ ಹೋಗಿದ್ದರು. ಛಲವಾದಿ ಅವರು ಬಾಯಿ ತೆಗೆದ್ರೆ ಏನೇನೋ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಬಿಗ್ ಬಾಸ್ ವಿಷಯ ನಮ್ಮ ಸರ್ಕಾರದ ಗಮನಕ್ಕೆ ಬಂದ ಕೂಡಲೇ ಡಿಸಿಎಂ ಸಾಹೇಬ್ರು ಸರಿ ಮಾಡಿದ್ದಾರೆ. ಕಾನೂನು ಯಾರಪ್ಪನಿಗಾದ್ರು ಒಂದೇ. ಕನ್ನಡ ಚಿತ್ರರಂಗದ ಪರವಾಗಿ ನಮ್ಮ ಸರ್ಕಾರ ಇದೆ. ಛಲವಾದಿ ಅವರೇ ಬಾಯಿಗೆ ಬಂದ ಹಾಗೇ ಮಾತಾಡಬೇಡಿ. ಕನ್ನಡ ಚಿತ್ರರಂಗದ ಬಗ್ಗೆ ನಮ್ಮ ಸರ್ಕಾರಕ್ಕೆ ಗೌರವ ಇದೆ.
ಛಲವಾದಿ ನಾರಾಯಣಸ್ವಾಮಿ ರಾಜಕೀಯವನ್ನ ರಾಜಕೀಯವಾಗಿ ಮಾಡಿ. ಸುದೀಪ್ ಸರ್ ಅವರೇ ಡಿಸಿಎಂಗೆ ಧನ್ಯವಾದ ಹೇಳಿದ್ದಾರೆ. ಛಲವಾದಿ ಅವರಿಗೆ ಐಡೆಂಟಿಟಿ ಕಾಡ್ತಿದೆ, ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ನಮ್ಮ ಗಮನಕ್ಕೆ ಈ ವಿಷಯ ಇರಲಿಲ್ಲ. ಒಂದು ದಿನ ಆದ ಮೇಲೆ ಗಮನಕ್ಕೆ ಬಂತು. ಸರಿ ಮಾಡಿದ್ದೇವೆ ಎಂದು ವಾಗ್ದಾಳಿ ನಡೆಸಿದರು..