ಗೋಕಾಕ್:ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಅಕ್ಕಿ ಕಳ್ಳರ ಹಾವಳಿ ಹೆಚ್ಚಾಗಿದೆ. ಅದರಂತೆ ಗೋಕಾಕ್ ನ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗಿಳಿಹೊಸೂರ ಗ್ರಾಮದಲ್ಲಿ ಬಡವರಿಗೆ ಹಂಚಿಕೆ ಮಾಡಬೇಕಿದ್ದ ಅಕ್ಕಿ ಹಣಕ್ಕಾಗಿ ಮಾರಾಟವಾಗ್ತಿದೆ. ಈ ಬಗ್ಗೆ ಕಣ್ಣಾರೆ ಕಂಡ ಗೋಕಾಕ್ ನ ತಹಸೀಲ್ದಾರ್ ಕಚೇರಿಯಲ್ಲಿ ಆಹಾರ ಶಿರಸ್ತೇದಾರರಾಗಿ ಕತ್ತವ್ಯ ನಿರ್ವಹಿಸುತ್ತಿರುವ ಈಶ್ವರ ಬಸಪ್ಪ ವಯನ್ನವರು ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ದೂರಿನ ಅನ್ವಯ ದಾಳಿ ನಡೆಸಿದ ಪೊಲೀಸರು ಇಬ್ಬರು ಅಕ್ಕಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಂಚಪ್ಪ ಶಿವಪ್ಪ ಬುಳ್ಳಿ ಹಾಗೂ ರಾಮಸಿದ್ದ ಯಲ್ಲಪ್ಪ ಮೂಕಗೋಳ ಬಂಧಿತರು. ಆರೋಪಿಗಳು ಬುಲೆರೋ ವಾಹನದಲ್ಲಿ ಮೂಟೆಗಟ್ಟಲೆ ಅಕ್ಕಿಯನ್ನು ತಂದು ಅದನ್ನು ಮಾರಾಟ ಮಾಡಲು ಬೇರೆಡೆ ಸಂಗ್ರಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ 94820 ರೂ. ಮೌಲ್ಯದ 4310 ತೂಕದ 98 ಅಕ್ಕಿ ಚೀಲಗಳನ್ನು ವಶಪಡಿಸಿ ಕೊಂಡಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಬುಲೆರೋ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಅಕ್ಕಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಗಮನ ಹರಿಸಿ ಅಕ್ಕಿ ಕಳ್ಳರ ಹಾವಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಒಟ್ನಲ್ಲಿ ಸರ್ಕಾರ ಬಡವರಿಗಾಗಿ ವಿತರಣೆ ಮಾಡುತ್ತಿರುವ ಅಕ್ಕಿಯನ್ನು ದುಷ್ಕರ್ಮಿಗಳು ಹಣದಾಸೆಗೆ ಮಾರಾಟ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ ಸಂಗತಿಯಾಗಿದೆ.