ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳು ಬದುಕನ್ನು ಅರಿತು ಅನುಭವಿಸಿ ನಿಜ ಜೀವನವನ್ನು ಕಂಡುಕೊಳ್ಳುವದು ಸರಕಾರಿ ಶಾಲೆಯಲ್ಲಿಯೇ. ಇಂತಹ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸಿರುವ ಶ್ರಮಿಕರ ಸಂಘಟನೆಯ ಕಾರ್ಯ ಪ್ರಶಂಸನೀಯ ಎಂದರು ಗದಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ಹೇಳಿದರು.
ಅವರು ಬೆಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 5-6ರಲ್ಲಿ ಅಮರಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ 5ನೇ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ನೀರಿನ ಬಾಟಲ್, ಕಂಪಾಸ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಷ್ಟದ ಬದುಕು ತಿಳಿದವರು ಮತ್ತೊಬ್ಬರ ಕಷ್ಟವನ್ನು ಅರಿಯಬಲ್ಲರು. ಸಮಾಜದಲ್ಲಿ ಶ್ರಮಜೀವಿಗಳಾಗಿ ಸಕಲರಿಗೂ ಸೂರು ಕಟ್ಟುವ ಗೌಂಡಿ ಮೇಸ್ತಿçಗಳು ಪರೋಪಕಾರಿಗಳು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ-ಬೆಟಗೇರಿ ನಗರಸಭೆಯ 9ನೇ ವಾರ್ಡ್ನ ಸದಸ್ಯ ಚಂದ್ರು ಕರಿಸೋಮನಗೌಡ್ರ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವದಿಂದ ಅಭ್ಯಾಸ ಮಾಡಿ ಸಂಶೋಧನೆಯನ್ನು ಕೈಗೊಳ್ಳುವ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ಅಮರಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಈಶ್ವರಪ್ಪ ಬಳ್ಳಾರಿ ವಹಿಸಿದ್ದರು. ವೇದಿಕೆಯ ಮೇಲೆ ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೊಹ್ಮದ್ಇರ್ಫಾನ್ ಡಂಬಳ, ಝಡ್.ಬಿ. ಬೇಲೇರಿ, ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಅಧ್ಯಕ್ಷ ಮೆಹಬೂಬ ಪಠಾಣ, ಸಿಆರ್ಪಿ ಸುಮಾ ಹಚಡದ ಹಾಗೂ ಮುಖ್ಯೋಪಾಧ್ಯಾಯರಾದ ಎಸ್.ಎಸ್. ಪಿಳ್ಳೆ, ಐ.ಎಂ. ರಾಜೇಖಾನ್ ಉಪಸ್ಥಿತರಿದ್ದರು.
ಸೃಷ್ಟಿ ಚಿಕ್ಕಣ್ಣವರ ಪ್ರಾರ್ಥಿಸಿದರು. ನಿಂಗಪ್ಪ ಕಟ್ಟಿಮನಿ ಸ್ವಾಗತಿಸಿದರು. ಕೆ.ಬಿ. ಕುಡಗುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಶೀರ್ ಚಿಕೇನಕೊಪ್ಪ ನಿರೂಪಿಸಿದರು. ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೊಹ್ಮದ್ಇರ್ಫಾನ್ ಡಂಬಳ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ, ಪಿ.ಸಿ. ಕನಾಜ್, ಎಸ್.ಸಿ. ತೊಂಡಿಹಾಳ, ಎಸ್.ಟಿ. ಖಾಬಾನವರ, ಬಾಪುಗೌಡ ಕರಿಸೋಮನಗೌಡ್ರ, ಶಂಕರಗೌಡ ಭರಮಗೌಡ್ರ, ಅರುಣ ಚಲವಾದಿ, ರಫೀಕ್ ಧಾರವಾಡ, ಅಡಿವೆಪ್ಪ ಚಲವಾದಿ, ಚಾಂದ್ಸಾಬ ಅಬ್ಬಿಗೇರಿ, ಜಾಕೀರ್ ಕಲಬುರ್ಗಿ, ದುರಗಪ್ಪ ಗುಡಿಮನಿ, ನೂರಅಹ್ಮದ್ ಶಿರಹಟ್ಟಿ, ಶಫೀ ನವಲಗುಂದ, ಮೋತಿಲಾಲ್ ಮಾಳಗಿಮನಿ, ಮೊಹ್ಮದ್ಸಾಬ ಈಟಿ, ಭೀಮಪ್ಪ ಪೂಜಾರ, ಕೆ.ಎಂ. ಕಲ್ಮನಿ, ಎನ್.ಕೆ. ಕಟ್ಟಿಮನಿ, ಕಲ್ಲಪ್ಪ ಮಾಕಾಪೂರ ಮುಂತಾದವರಿದ್ದರು.
ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ನಾವು ಇನ್ನೊಬ್ಬರ ಬದುಕಿಗೆ ಸಹಾಯ ಮಾಡಿದಾಗ ನಮ್ಮ ಶ್ರಮಕ್ಕೆ ಬೆಲೆ ಬರುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ನೀಡುವ ಸಹಾಯ ದೇವರ ಕೆಲಸವಾಗಿದ್ದು, ಕಟ್ಟಡ ಕಾರ್ಮಿಕ ಸಂಘದ ಈ ಕಾರ್ಯವನ್ನು ಶಿಕ್ಷಣ ಇಲಾಖೆ ಅಭಿನಂದಿಸುತ್ತದೆ ಎಂದರು.
Advertisement