ವಿಜಯಸಾಕ್ಷಿ ಸುದ್ದಿ, ಗದಗ : ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧಿ ಸಸ್ಯಗಳ ಆಗರ ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ಮಾಡಿಕೊಡದೆ 1000 ಕೋಟಿಯ ಪ್ಯಾಕೇಜ್ ಯೋಜನೆಯನ್ನು ರೂಪಿಸಿ ಕಪ್ಪತಗುಡ್ಡ ವ್ಯಾಪ್ತಿಯ ಜೀವ ಹಾಗೂ ಸಸ್ಯ ವೈವಿಧ್ಯ ಸಂರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಲ್ಲಿ ವಿನಂತಿಸಿದ್ದಾರೆ.
ಈ ಬಗ್ಗೆ ಸಚಿವರಿಗೆ ಬರೆದ ಪತ್ರದಲ್ಲಿ, ಅಸಂಖ್ಯಾತ ಜನರ ಹೋರಾಟದ ಫಲವಾಗಿ 2017ರಲ್ಲಿ ಸಂರಕ್ಷಿತ ಮೀಸಲು ಅರಣ್ಯವೆಂದು, 2019ರಲ್ಲಿ ವನ್ಯಜೀವಿದಾಮ ಎಂದು ಘೋಷಣೆಯಾಯಿತು. ಆದರೆ ಅದರ ಸೂಕ್ಷ್ಮ ಪ್ರದೇಶ ಮಿತಿಯನ್ನ 10 ಕಿ.ಮೀನಿಂದ 1 ಕಿ.ಮೀಗೆ ಗೊತ್ತುಪಡಿಸಿದ್ದೆಯಾದರೆ ಮತ್ತು ಪ್ರಭಾವಿ ಕಂಪನಿ ಹಾಗು ವ್ಯಕ್ತಿಗಳ ಒತ್ತಡಕ್ಕೆ ಮಣಿದು ಕೈಗಾರಿಕೆ, ಗಣಿಗಾರಿಕೆಗಳ ಹೆಸರಲ್ಲಿ ಪರಿಸರ ವಿರೋಧಿ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ಮಾಡಿಕೊಟ್ಟರೆ ಅಲ್ಲಿಯ ಅಪಾರ ಪ್ರಮಾಣದ ಅರಣ್ಯ, ವನ್ಯಜೀವಿ ಸಂಪತ್ತು ಮತ್ತು ವಿಶಿಷ್ಟ ಬಗೆಯ ಸಸ್ಯ ಪ್ರಭೇದಗಳು, ಔಷಧಿ ಸಸ್ಯಗಳು ನಶಿಸಿ ಹೋಗಲಿವೆ.
ಪರಿಸರ ದೃಷ್ಟಿಯಿಂದ ನಮ್ಮ ದೇಶ ಸುರಕ್ಷಿತವಾಗಿ ಇರಬೇಕಾದಲ್ಲಿ ಕನಿಷ್ಟ ಶೇ.33ರಷ್ಟು ಅರಣ್ಯ ಪ್ರದೇಶ ಹೊಂದಿರಬೇಕು ಆದರೆ ಶೇ 21.71ರಷ್ಟು ಮಾತ್ರ ಉಳಿದಿದೆ. ಈ ಎಲ್ಲ ಕಾರಣಕ್ಕಾಗಿ ಅತಿಯಾದ ಮಳೆ, ಪ್ರವಾಹ, ಬರಗಾಲ, ಸಾಂಕ್ರಮಿಕ ರೋಗಗಳ ಹೆಚ್ಚಳದಂತಹ ಪರಿಸರದ ವ್ಯೆತಿರಿಕ್ತ ಪರಿಣಾಮಗಳನ್ನ ಜಗತ್ತು ಈಗಾಗಲೇ ಎದುರಿಸುವಂತಾಗಿದೆ. ಆದರಿಂದ ದಯವಿಟ್ಟು ರಾಜ್ಯ ಸರ್ಕಾರ ಗಣಿಗಾರಿಕೆಗೆ ಮುಂದಾಗದಂತೆ ಗದಗ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ತಾವು ಮುಖ್ಯಮಂತ್ರಿಗಳ ಗಮನ ಸೆಳೆದು ಪ್ರಸ್ತಾವಿತ ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ವಿನಂತಿಸಿದ್ದಾರೆ.