ಗದಗ: ಕೇಂದ್ರ ಸರ್ಕಾರದಿಂದ ಶಿಕ್ಷಣಕ್ಕೆ ಒತ್ತು ಸಿಗದ ಹಿನ್ನೆಲೆ ವಿದ್ಯಾಭ್ಯಾಸದಿಂದ ಹಿಂದೆ ಸರಿಯುತ್ತಿರುವ SC-ST ಸೇರಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೆ ಎಚ್ ಪಾಟೀಲ ಹೆಸರಲ್ಲಿ ಸ್ಕಾಲರ್ಶಿಪ್ ಘೋಷಿಸಿ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆ ಕೊಟ್ಟಿದ್ದಾರೆ.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಕೆ.ಎಚ್. ಪಾಟೀಲ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಕೆ.ಎಚ್. ಪಾಟೀಲ ಜನ್ಮ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಆರೋಗ್ಯ ಎರಡು ಕೂಡ ಮಹತ್ವದ್ದಾಗಿವೆ. ಅದರಂತೆ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ ಅವರು ಶಿಕ್ಷಣಕ್ಕೆ ಮಹತ್ವ ನೀಡಿ ಮಹಾನ್ ನಾಯಕರಾಗಿದ್ದರು. ಆದರೆ, ದೇಶದಲ್ಲಿ ಇಂದು ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ಸಿಗುತ್ತಿಲ್ಲ. ಕೇಂದ್ರ ಸರ್ಕಾರದಿಂದ ಶಿಕ್ಷಣಕ್ಕಾಗಿ ಬರುವ ಹಣ, ಶಿಕ್ಷಕರ ನೇಮಕ ಪ್ರಕ್ರಿಯೆ ಕಡಿತಗೊಂಡಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಶೇ. 50ರಷ್ಟು ಹುದ್ದೆಗಳು ಖಾಲಿಯಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ಕೊಡಬೇಕಾಗಿ ಬಂದಿದೆ ಎಂದರು.
ಕೇಂದ್ರ ಸರಕಾರದ ನವೋದಯ ಶಾಲೆಗಳಲ್ಲಿ 40,000, ಕೇಂದ್ರೀಯ ವಿದ್ಯಾಲಯದಲ್ಲಿ 7,400 ಹಾಗೂ ವಿಶ್ವವಿದ್ಯಾಲಯಗಳಲ್ಲಿ 5,400 ಹುದ್ದೆಗಳು ಖಾಲಿಯಿವೆ. ದೇಶದಲ್ಲಿ 90 ಸಾವಿರ ಶಾಲೆಗಳು ಬಂದ್ ಆಗಿವೆ. 50 ಸಾವಿರ ಉತ್ತರ ಪ್ರದೇಶ, ಬಿಹಾರ ರಾಜ್ಯದಲ್ಲಿ ಶಾಲೆಗಳು ಬಂದ್ ಆಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಖಾಸಗಿ ಶಾಲೆಗಳು ಶೇ. 40ರಷ್ಟು ಹೆಚ್ಚಿವೆ. ಬಡಮಕ್ಕಳು ಓದುವುದು ಕಷ್ಟವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟು ಬೆಳೆಸಬೇಕಿದೆ. ಬಡವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕಾದರೆ ಶಿಕ್ಷಣವೊಂದೇ ಮಾರ್ಗ. ಸರಕಾರಿ ಬೆಂಚ್ ಸೇರಿ ಪೀಠೋಪಕರಣಗಳನ್ನು ಕೊಡುಗೆ ನೀಡಿ ಎಂದು ಮನವಿ ಮಾಡಿದರು.
ಕೇಂದ್ರ ಶಿಕ್ಷಣ ಕ್ಷೇತ್ರದಲ್ಲಿ 13 ಸಾವಿರ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗುತ್ತಿದ್ದಾರೆ. ಅವರಿಗೆ ಸ್ಕಾಲರ್ ಶಿಪ್ ನೀಡುವ ಅಗತ್ಯವಿದೆ. ಕೆ.ಎಚ್. ಪಾಟೀಲ ಅವರ ಹೆಸರಿನಲ್ಲಿ ಸ್ಕಾಲರ್ ಶಿಪ್ ನೀಡುವ ಯೋಜನೆ ಆರಂಭಿಸಿ ಎಂದು ಸಲಹೆ ಕೊಟ್ಟಿದ್ದಾರೆ.
ಇದೇ ವೇಳೆ ಕ್ಷೇತ್ರ ಮರುವಿಂಗಡಣೆ ಬಗ್ಗೆ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಉತ್ತರ ರಾಜ್ಯದ ಕ್ಷೇತ್ರ ಹೆಚ್ಚಿಸಲು ಹುನ್ನಾರ ನಡೆಯುತ್ತಿದೆ. ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗಿದೆ ಎಂದರು.