ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಎಂ.ಕೆ.ಬಿ.ಎಸ್ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ವಿಜ್ರಂಭಣೆಯಿಂದ ಜರುಗಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಸ್ವಾಮೀಜಿಗಳು ಮಾತನಾಡಿ, ಸ್ವ ಪ್ರತಿಭೆಗೆ ಈ ವೇದಿಕೆ ಅವಕಾಶವಾಗಿದ್ದು, ಮೊಬೈಲ್ ಗೀಳು ಬಿಟ್ಟು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಹಾಜರಾತಿ ಹೆಚ್ಚಿಸಲು, ಲಕ್ಕುಂಡಿಯ ಇತಿಹಾಸ ಮರುಕಳಿಸುವಂತೆ ಮಾಡಲು ಶಿಕ್ಷಣ ಇಲಾಖೆ ಟೊಂಕ ಕಟ್ಟಿ ನಿಂತಿದೆ ಎಂದರು. ಜಿ.ಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ಮಾತನಾಡಿ, ಲಕ್ಕುಂಡಿ ಇತಿಹಾಸ ಪ್ರಸಿದ್ಧ ಸ್ಥಳವಾಗಿದ್ದು, ಎಲ್ಲ ದೇವಸ್ಥಾನದಂತೆ ಈ ಶತಮಾನದ ಶಾಲೆಯ ಇತಿಹಾಸ ಉಳಿಯುವಂತೆ ಮಾಡಬೇಕಾಗಿದೆ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷೆ ನಾಗಮ್ಮ ಹಾಲಿನವರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಶಿಕ್ಷಕರ ಸಂಘದ ಡಿ.ಎಸ್. ತಳವಾರ, ವಿ.ಎಂ. ಹಿರೇಮಠ, ಎಸ್.ಆರ್. ಬಂಡಿ, ಎನ್.ಎಚ್. ಪಾಟೀಲ, ಬಿ.ಬಿ. ಹಡಪದ, ಎಫ್.ಎ ಗಾಣಿಗೇರ, ಅಶೋಕ ಬೂದಿಹಾಳ, ಗ್ರಾ.ಪಂ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.
ಎಂ.ಪಿ. ಹೊನ್ನಾಪೂರ ಸ್ವಾಗತಿಸಿದರು. ಅಂಜನಾ ಕರಿಯಲ್ಲಪ್ಪನವರ ನಿರೂಪಿಸಿದರು. ಎಸ್.ಜಿ. ಕುರುವತ್ತೆಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಪಿ. ಶೀಟ ವರದಿ ವಾಚಿಸಿದರು. ಪಿ.ಎನ್. ಶಿರೋಳ ವಂದಿಸಿದರು.