ಅದ್ಯಾಕೋ ಏನೋ ಗೊತ್ತಿಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂ ಕಬ್ಬಿಣದ ಕಡಲೆಯಾಗಿದೆ. ಇದುವರೆಗೂ 7 ಪಂದ್ಯ ಆಡಿರುವ ಆರ್ ಸಿಬಿ ನಾಲ್ಕು ಪಂದ್ಯ ಗೆದ್ದಿದ್ದು, ಮೂರರಲ್ಲಿ ಸೋಲು ಕಂಡಿದೆ. ಸೋಲು ಕಂಡ ಮೂರು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಎಂಬುವುದು ಗಮನಾರ್ಹ.
ಹೌದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯ ಮಳೆಯಿಂದಾಗಿ 14 ಓವರ್ ಗಳಿಗೆ ಕಡಿತಗೊಳಿಸಲಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ ಹೊಡಿಬಡಿ ಆಟಕ್ಕೆ ಮುಂದಾಗಿ 9 ವಿಕೆಟ್ ಗೆ 95 ರನ್ ಕಲೆಹಾಕಿತು. ಸುಲಭ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ 12.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.
ಪಂಜಾಬ್ ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಆರ್ ಸಿಬಿ ಈ ಸೋಲಿನೊಂದಿಗೆ 4ನೇ ಸ್ಥಾನದಲ್ಲಿ ಉಳಿದುಕೊಂಡಿತು. ಆರ್ ಸಿಬಿ ಗೆದ್ದ 4 ಪಂದ್ಯಗಳು ತವರಿನ ಹೊರಗೆ ಆಗಿದ್ದು, ಈ ಋತುವಿನಲ್ಲಿ ತವರಿನಲ್ಲಿ ಆಡಿದ ಒಂದೂ ಪಂದ್ಯ ಗೆಲ್ಲಲು ಆಗದೇ ಇರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಅದರಲ್ಲೂ ಈ ಪಂದ್ಯ ಮಳೆ ಸೋಲಿನ ಮೇಲೆ ಬರೆ ಎಳೆಯಿತು. ಅದಕ್ಕೆ ತಕ್ಕಂತೆ ಟಾಸ್ ಸೋತಿದ್ದು ಕೂಡ ದುಬಾರಿ ಆಯಿತು. ಪಂಜಾಬ್ ಪರ ನೆಹಲ್ ವಧೇರ (33 ರನ್), ಜೋಸ್ ಇಂಗ್ಲೀಸ್ (14), ಪ್ರಿಯಾಂಶ್ ಆರ್ಯ (16) ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಆರ್ ಸಿಬಿ ಪರ ಜೋಶ್ ಹೇಜಲ್ ವುಡ್ 3 ಮತ್ತು ಭುವನೇಶ್ವರ್ ಕುಮಾರ್ 2 ವಿಕೆಟ್ ಗಳಿಸಿ ಹೋರಾಟ ನಡೆಸಿದ್ದು ಫಲ ನೀಡಲಿಲ್ಲ. ಮಳೆಯಿಂದ ತೇವಗೊಂಡಿದ್ದ ಪಿಚ್ ನಲ್ಲಿ ರನ್ ಗಳಿಸಲು ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಪರದಾಡಿದರು.
ಒಟ್ಟಾರೆ ತವರಲ್ಲಿ ಹೀಗೆ RCB ಸೋಲು ಕಾಣುತ್ತಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.