ನಟ ದರ್ಶನ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ದರ್ಶನ್ ಮಾತ್ರವಲ್ಲ ಪತ್ನಿ ವಿಜಯಲಕ್ಷ್ಮೀ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಇಬ್ಬರಿಗೂ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಹೌದು ನಿಷೇಧಿತ ಬಾತುಕೋಳಿಗಳನ್ನ ಕೂಡಿಹಾಕಿದ ಆರೋಪದ ಆಡಿ ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್, ವಿಜಯಲಕ್ಷ್ಮಿ, ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಟಿ.ನರಸೀಪುರದ ಸಿವಿಲ್ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ನೀಡಿದ್ದರು.
ಟಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿಯ ವಿಜಯಲಕ್ಷ್ಮೀ ಮಾಲೀಕತ್ವದ ಜಾಗದಲ್ಲಿರುವ ತೂಗುದೀಪ ಫಾರಂ ಹೌಸ್ನಲ್ಲಿ ಅಕ್ರಮವಾಗಿ ವಿದೇಶಿ ಬಾತುಕೋಳಿಗಳನ್ನು ಸಾಕಲಾಗುತ್ತದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್ ಅವರು ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಫಾರಂ ಹೌಸ್ನಲ್ಲಿರುವ ಪ್ರಾಣಿ, ಪಕ್ಷಿಗಳ ಬಗ್ಗೆ ವಿವರಿಸಿದ್ದರು.
ಮಂಗೋಲಿಯಾ, ರಷ್ಯಾ, ಚೀನಾದಲ್ಲಿ ಕಾಣಿಸಿಕೊಳ್ಳುವ Bar-headed goose ಬಾತುಕೋಳಿಯ ಬಗ್ಗೆ ದರ್ಶನ್ ಮಾತನಾಡಿದ್ದರು. ಸಂದರ್ಶನ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇದು ಚರ್ಚೆಗೆ ಕಾರಣವಾಗಿತ್ತು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಫಾರಂ ಹೌಸ್ ಮೇಲೆ ದಾಳಿ ನಡೆಸಿದ್ದರು.
ಪ್ರಾಥಮಿಕ ತನಿಖೆ ನಡೆಸಿದ ಬಳಿಕ ವರದಿ ಸಮೇತ ಖಾಸಗಿ ದೂರು ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳ ತನಿಖೆಯಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಕಾರಣ ಕೋರ್ಟ್ ಸಮನ್ಸ್ ಜಾರಿ ಮಾಡಿ ಜುಲೈ 4 ರಂದು ದರ್ಶನ್, ವಿಜಯಲಕ್ಷ್ಮಿ ಮತ್ತು ನಾಗರಾಜ್ಗೆ ಖದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.