ಬೆಳಗಾವಿ;- ನನ್ನ ಬಂಡಾಯಕ್ಕೆ ಸಚಿವ ಸತೀಶ್ ಜಾರಕಿಹೊಳಿ ಮೂಲಕ ಉತ್ತರ ಸಿಕ್ಕಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,, ಈ ಹಿಂದೆ ನಾನು ಕಾಂಗ್ರೆಸ್ನಲ್ಲಿ ಬಂಡಾಯವೆದ್ದಾಗ ಜನ ನನ್ನನ್ನು ಬೈಯ್ದಿದ್ದರು. ನನ್ನನ್ನು ಬೈಯ್ದಿದ್ದವರಿಗೆ ಈಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೂಲಕ ಉತ್ತರ ಸಿಕ್ಕಿದೆ. ನಾನು ಏಕೆ ಬಂಡಾಯವೆದ್ದಿದ್ದೆ ಎಂಬುದು ಗೊತ್ತಾಗಿದೆ ಎಂದರು.
ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವ ವೇಳೆಯೇ ಸತೀಶ್ ಜಾರಕಿಹೊಳಿ ಪರಿಸ್ಥಿತಿ ಈ ರೀತಿಯಾಗಿದೆ. ಇನ್ನು ಬೇರೆಯವರು ಮುಖ್ಯಮಂತ್ರಿಯಾದರೆ ಅವರ ಪರಿಸ್ಥಿತಿ ಏನು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಳ್ಳುವ ರೀತಿ ನೋಡಿದರೆ ಅವರು ಮೊದಲಿನಂತಿಲ್ಲ. ಹಾಗಾಗಿ, ಸಿದ್ದರಾಮಯ್ಯನವರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಮಾತಿನ ದರ್ಪ, ಗಂಭೀರತೆ ಈಗ ಕಾಣುತ್ತಿಲ್ಲ. ಏಕೆ ಹೀಗೆ ಮಾಡುತ್ತಿದ್ದಾರೋ ಎಂಬುದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ, ಅವರ ಬಗ್ಗೆ ಅಪಾರ ಗೌರವವಿದೆ. ಬಹುಶಃ ಹೈಕಮಾಂಡ್ ಹಾಗೂ ಕೆಲವರು ಅವರನ್ನು ಮುಕ್ತವಾಗಿ ಬಿಟ್ಟಿಲ್ಲ ಎಂದು ದೂರಿದರು. ಡಿಸಿಎಂ ಡಿ.ಕೆ.ಶಿವಕುಮಾರ ಇರುವವರೆಗೂ ನಮಗೆ ಪ್ರತಿಪಕ್ಷವಾಗಿ ವರದಾನ ಎಂದು ಇದೇ ವೇಳೆ ತಿಳಿಸಿದರು.