ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿವಶರಣ ಹಡಪದ ಅಪ್ಪಣ್ಣನವರ ವಚನ ಸಾಹಿತ್ಯದ ಶ್ರೇಷ್ಠ ಚಿಂತನೆಗಳು ಸಮಾಜದ ಪ್ರಗತಿಗೆ ದಾರಿದೀಪವಾಗಿವೆ ಎಂದು ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಹೇಳಿದರು.
ಅವರು ಗುರುವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಸಂದರ್ಭದಲ್ಲಿ ಮಾತನಾಡಿದರು.
ಬಸವಣ್ಣನವರ ಅನುಯಾಯಿಯಾಗಿದ್ದ ಹಡಪದ ಅಪ್ಪಣ್ಣ ಅವರು ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ಹೋಗಲಾಡಿಸಿ ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಶರಣರು, ಸಂತರು, ದಾರ್ಶನಿಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ವಿಶ್ವಮಾನ್ಯವಾಗಿಸಬೇಕು. ತತ್ವಾದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುತ್ತದೆ ಎಂದು ಹೇಳಿದರು.
ಹಡಪದ ಸಮಾಜದ ತಾಲೂಕಾಧ್ಯಕ್ಷ ಗುಡ್ಡಪ್ಪ ಹಡಪದ ಮಾತನಾಡಿ, ರಾಜ್ಯದಲ್ಲಿ ಹಡಪದ ಸಮಾಜದವರು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಸಮಾಜವನ್ನು ಪ್ರವರ್ಗ 1ಕ್ಕೆ ಸೇರಿಸಬೇಕು. ಸಮಾಜದ ನಿಗಮ ಮಂಡಳಿ ಸ್ಥಾಪಿಸಬೇಕು. ಕ್ಷೌರಿಕ ವೃತ್ತಿದಾರರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕುಲಕಸುಬು ಆಧಾರಿತ ಸಲಕರಣೆಗಳನ್ನು ಪೂರೈಸಲು ಸರ್ಕಾರ ಆದೇಶಿಸಬೇಕು ಎಂದರು.
ಈ ವೇಳೆ ಅಮರೇಶ ತೆಂಬದಮನಿ, ಎನ್.ಎಚ್. ಹಡಪದ, ವಿನೋದ ನಾವಿ, ಶಂಕರ ನಾವಿ, ಮುತ್ತಪ್ಪ ನಾವಿ, ದುಂಡಪ್ಪ ಹಡಪದ, ನಾಗರಾಜ ಹಡಪದ, ನಿಂಗಪ್ಪ ಹಡಪದ, ಮಂಜುನಾಥ ಹಡಪದ ಸೇರಿದಂತೆ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳು ಇದ್ದರು. ಸ್ಥಳೀಯ ಪುರಸಭೆ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಯಿತು.