ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ನಾಗರಿಕರು ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಾಮು ಪೂಜಾರ, ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಪೈಪ್ಲೈನ್ ದುರಸ್ತಿ ಕಾರಣದಿಂದ ಮಳೆಗಾಲದಲ್ಲೂ 20 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಪಟ್ಟಣದ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ನಿತ್ಯ ಸಂಚಾರಕ್ಕೆ ಪರದಾಡುತ್ತಿದ್ದಾರೆ. ಚರಂಡಿಗಳ ಸಮಸ್ಯೆಯಿಂದ ಮಳೆನೀರೆಲ್ಲ ರಸ್ತೆಯುದ್ದ ಹರಿದು ಸಮಸ್ಯೆಯಾಗುತ್ತಿದೆ. ಪಟ್ಟಣ ಸೇರಿ ಗ್ರಾಮೀಣ ಭಾಗದ ಜನರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಪರದಾಡುತ್ತಾರೆ. ಮುಖ್ಯ ಬಜಾರ ರಸ್ತೆಯಲ್ಲಿ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲದೇ ತೊಂದರೆಯಾಗುತ್ತಿದೆ.
ಇಲ್ಲಿನ ದೇವಾಲಯಗಳು, ಬಸದಿ, ಮಸೀದಿಗಳು, ತಹಸೀಲ್ದಾರ ಕಚೇರಿ, ನ್ಯಾಯಾಲಯಕ್ಕೆ ಮಾರ್ಗಸೂಚಕ ಫಲಕಗಳು ಇಲ್ಲದೆ ದಿಕ್ಕುತೋಚದ ಪರಿಸ್ಥಿತಿಯಿದೆ. ಬಜಾರ್ ರಸ್ತೆ ಸೇರಿ ನಗರೋತ್ಥಾನ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಬೀದಿ ದೀಪಗಳ ನಿರ್ವಹಣೆ, ಸ್ವಚ್ಛತೆ ಹೀಗೆ ಸಮಸ್ಯೆಗಳ ಆಗರವೇ ಆಗಿರುವ ಪಟ್ಟಣದ ಅಭಿವೃದ್ಧಿಗೆ ಪುರಸಭೆಯವರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಬಿಜೆಪಿ ಶಿರಹಟ್ಟಿ ಮಂಡಳ ಪ್ರ.ಕಾರ್ಯದರ್ಶಿ ಅನಿಲ ಮುಳುಗುಂದ, ರಂಗಣ್ಣ ಬದಿ, ರಮೇಶರೆಡ್ಡಿ ಮೇಲಗಿರಿ, ನವೀನ ಕುಂಬಾರ, ನೇಮಿನಾಥ ಪಾಟೀಲ, ಟಾಕಪ್ಪ ಸಾತಪುತೆ, ಲಕ್ಷ್ಮಣ ಹಳ್ಳಿಕೇರಿ, ಮಂಜು ಸಾತಪುತೆ, ವಿನಾಯಕ ಕಾಂಬಳೆ, ಪ್ರಜ್ವಲ ಕಾತರಕಿ, ಬಸವರಾಜ ಗಡ್ಡದೇವರಮಠ, ಯಲ್ಲಪ್ಪ ಬಾಕಳೆ ಮುಂತಾದವರಿದ್ದರು.