ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರದಲ್ಲಿಯ ಕೊಳಗೇರಿ ಪ್ರದೇಶಗಳು ಸ್ಲಂ ಘೋಷಣೆಯಾಗಿ ದಶಕಗಳೇ ಕಳೆದರೂ ಸಹ ಈವರೆಗೊ ಅಭಿವೃದ್ಧಿಯಾಗದೇ ಸೌಲಭ್ಯ ವಂಚಿತ ಪ್ರದೇಶಗಳಾಗಿವೆ. ನಗರದ ಕೊಳಗೇರಿ ಪ್ರದೇಶಗಳ ಅಭವೃದ್ಧಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ತಕ್ಷಣ ಗದಗ-ಬೆಟಗೇರಿ ನಗರದ ಕೊಳಗೇರಿ ಪ್ರದೇಶಗಳ ವಸತಿ ಮತ್ತು ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ನೀಡಿ ಒತ್ತಾಯಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್.ಮಾನ್ವಿ ಮಾತನಾಡಿ, ಗದಗ-ಬೆಟಗೇರಿ ನಗರದಲ್ಲಿ ಸುಮಾರು 48 ಕೊಳಚೆ ಪ್ರದೇಶಗಳನ್ನು ಸ್ಲಂ ಕಾಯ್ದೆಡಿಯಲ್ಲಿ ಘೋಷಣೆ ಮಾಡಲಾಗಿದೆ. ಇನ್ನೂ ಸುಮಾರು 20ಕ್ಕೂ ಹೆಚ್ಚು ಗುಡಿಸಲು ಪ್ರದೇಶಗಳನ್ನು ಘೋಷಣೆ ಮಾಡಬೇಕಾಗಿದೆ. ಈ ಹಿಂದೆ ಘೋಷಣೆ ಮಾಡಲಾಗಿರುವ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗಾಗಿ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ನಿರಂತರ ಹೋರಾಟಗಳನ್ನು ನಡೆಸಲಾಗುತ್ತಿದೆ. ಆದರೆ, ಈವರೆಗೂ ಸ್ಲಂ ಜನರ ಬೇಡಿಕೆಗಳಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನ್ ಬಾನು ಹವಾಲ್ದಾರ, ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೆಹರುನಿಸಾ ಡಂಬಳ, ಶರಣಪ್ಪ ಸೂಡಿ, ಮೌಲಾಸಾಬ್ ಗಚ್ಚಿ, ಮೆಹಬೂಬ್ ಸಾಬ್ ಬಳ್ಳಾರಿ, ಮಂಜುನಾಥ ಶ್ರೀಗಿರಿ, ಮೈಮುನ ಬೈರಕದಾರ, ಖಾಜಾಸಾಬ್ ಇಸ್ಮಾಯಿಲ್ ನವರ, ಸಾಕ್ರುಬೈ ಗೋಸಾಯಿ, ಸಲೀಂ ಹರಿಹರ, ಖಾಜಾಸಾಬ್ ಬಳ್ಳಾರಿ, ವೆಂಕಟೇಶ್ ಬಿಂಕದಕಟ್ಟಿ, ರಿಜ್ವಾನ್ ಮುಲ್ಲಾ, ಮಕ್ತುಮಸಾಬ್ ಮುಲ್ಲಾನವರ, ದಾದು ಗೋಸಾವಿ ಮುಂತಾದವರು ಉಪಸ್ಥಿತರಿದ್ದರು.
ಸ್ಲಂ ಬೋರ್ಡ್ ಅಧಿಕಾರಿಗಳು ಮನವಿ ಸ್ವೀಕರಿಸಿ, ಸಮಿತಿ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು. ಸಭೆಯಲ್ಲಿ ಗದಗ-ಬೆಟಗೇರಿ ನಗರದ ಕೊಳಗೇರಿ ಪ್ರದೇಶಗಳಲ್ಲಿ ವಸತಿ, ನಾಗರಿಕ ಸೌಲಭ್ಯ, ಹಕ್ಕುಪತ್ರ, ನೋಂದಣಿ ಪ್ರಕ್ರಿಯೆ ನಡೆಸುವುದು, ಸ್ಲಂಗಳಲ್ಲಿ ಮಹಿಳೆಯರ ಶೌಚಾಲಯಗಳ ನಿರ್ಮಾಣ, ವಸತಿ ಯೋಜನೆಯಲ್ಲಿ ನಡೆಯುತ್ತಿರುವ ಅವ್ಯವಹಾರ ಕುರಿತು ಚರ್ಚೆ ನಡೆಸಲಾಗಿದೆ. ಸ್ಲಂ ಜನರ ಹಕ್ಕೊತ್ತಾಯಗಳಿಗೆ ಹಂತ-ಹಂತವಾಗಿ ಕೆಲಸ ಮಾಡಲಾಗುವುದೆಂದು ಭರವಸೆ ನೀಡಿದರು.


