ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಗದಗ ಜಿಲ್ಲಾಧ್ಯಕ್ಷ ಬಸವರಾಜ ಹು.ಕೊರ್ಲಹಳ್ಳಿ, ಈಗಾಗಲೇ ಆಡಳಿತದಲ್ಲಿರುವ ಕಾಂಗ್ರೆಸ್ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ರಾಜ್ಯದ ಸರಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ತರುವ ಭರವಸೆಯನ್ನು ನೀಡಿತ್ತು. ನೀಡಿರುವ ಭರವಸೆಯಂತೆ ಶೀಘ್ರದಲ್ಲಿಯೇ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ (ಓಪಿಎಸ್)ವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಅನುದಾನಿತ ನೌಕರರಿಗೂ ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ತಾರತಮ್ಯವಿಲ್ಲದಂತೆ ಯಥಾವತ್ತಾಗಿ ಜಾರಿಗೊಳಿಸುವುದು, ಸರ್ಕಾರಿ ಶಾಲಾ ಕಾಲೇಜುಗಳ ಮತ್ತು ಅನುದಾನಿತ ಶಾಲಾ-ಕಾಲೇಜುಗಳ ಮಕ್ಕಳು ಹಾಗೂ ನೌಕರರುಗಳಿಗೆ ನೀಡುವ ಸೌಲಭ್ಯಗಳಲ್ಲಿ ತಾರತಮ್ಯವನ್ನು ಮಾಡದಂತೆ ಸಮಾನವಾಗಿ ಸೌಲಭ್ಯಗಳನ್ನು ನೀಡುವುದು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ವಿ.ಹೆಚ್. ಕೊಳ್ಳಿ, ಈರಣ್ಣ ಹಾದಿಮನಿ, ರವಿ ಕೋಟಿಯವರು, ಸಂಗಮೇಶ ಅಬ್ಬಿಗೇರಿ, ಹೆಚ್.ಹೆಚ್. ಹಳ್ಳಿ, ಜಿ.ಬಿ. ಲಮಾಣಿ, ಎಸ್.ಎಸ್. ಕುರಿ, ಹೆಚ್.ಎನ್. ಕುರಿ, ಎಸ್.ಕೆ. ಅಂಗಡಿ, ಎಸ್.ಎಸ್. ರಾಹುತರ, ಮಂಜುನಾಥ ಮರಾಟೆ, ಎಂ.ಡಿ. ನದಾಫ್, ಎಮ್.ವಾಯ್. ಮಾದರ, ಎ.ಎ. ಹದ್ಲಿ, ಕೆ.ಎಸ್. ಮಡಿವಾಳರ, ಆರ್.ವ್ಹಿ. ಗೊಂಡಬಾಳ, ಕೆ.ಎಸ್. ಕಟಗಿ, ಎಸ್.ಎಸ್. ಗೌಡರ, ಸಿ.ಎಸ್. ಮುಂಡವಾಡ, ಡಿ.ಎಫ್. ಹೊಸಮನಿ, ಎಂ.ಕೆ. ಬೇವಿನಕೊಪ್ಪ, ಎನ್.ಎಸ್. ಚನ್ನಳ್ಳಿ, ಸಿ.ಎಸ್. ಮುಧೋಳ, ಮರಕಟ್ಟಿ ಸೇರಿದಂತೆ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರು ಉಪಸ್ಥಿತರಿದ್ದರು.