ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಹುದ್ದೆಯಲ್ಲಿ ಭರ್ತಿಯಾಗಿ ಸಾರ್ವಜನಿಕರ ಹಿತರಕ್ಷಣೆಗಾಗಿ, ಸಮಾಜದ ನಾಗರಿಕರ ರಕ್ಷಣೆಗಾಗಿ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಶಿರಹಟ್ಟಿ ಪೊಲೀಸ್ ಠಾಣೆಯ ಪಿ.ಎಸ್.ಐ ಈರಪ್ಪ ಎಚ್.ರಿಟ್ಟಿ ಅವರಿಗೆ ಕೆಲ ಸಂಘಟನೆಗಳ ಮುಖಂಡರು ಹಾಗೂ ರಾಜಕೀಯ ವ್ಯಕ್ತಿಗಳು ನಿರಂತರವಾಗಿ ಕರ್ತವ್ಯದಲ್ಲಿ ಕಿರುಕುಳವನ್ನು ನೀಡುತ್ತಿದ್ದಾರೆ ಹಾಗೂ ವರ್ಗಾವಣೆ ಮಾಡಲು ಹಠ ತೊಟ್ಟಿದ್ದಾರೆ.
ಈ ವಿಚಾರವನ್ನು ಶೀಘ್ರವೇ ಕೂಲಂಕಷವಾಗಿ ಪರಿಶೀಲಿಸಿ ಪಿಎಸ್ಐ ರಿಟ್ಟಿ ಅವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಗದಗ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಮಾಜಿ ಸೈನಿಕ ಈರಪ್ಪ ಎಚ್.ರಿಟ್ಟಿಯವರು ಗದಗ ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ಮೊರೆ ಹೋದಾಗ ಸಂಘದ ಅಧ್ಯಕ್ಷರಾದ ಬಸಲಿಂಗಪ್ಪ ಮುಂಡರಗಿ ಹಾಗೂ ಎಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಈ ವಿಚಾರವನ್ನು ಖಂಡಿಸಿ, ಈ ಬಗ್ಗೆ ಪ್ರಾಮಾಣಿಕ ಅಧಿಕಾರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲು ವಿನಂತಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು, ವೀರನಾರಿಯರು ಹಾಗೂ ಅರೆಸೇನಾ ಪಡೆಗಳ ಯೋಧರು ಉಪಸ್ಥಿತರಿದ್ದರು.



