ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕು ಸೇರಿದಂತೆ ರಾಜ್ಯದಲ್ಲಿ ಚಿಕ್ಕಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ, ತಾಯಂದಿರಿಗೆ ಆಹಾರವನ್ನು ವಿತ್ತರಿಸುತ್ತಿದ್ದು, ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಕಡಿಮೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿಗಳು ಈ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಘಟಕ ಸೋಮವಾರ ತಹಸೀಲ್ದಾರರ ಮೂಲಕ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಅಧ್ಯಕ್ಷ ರವಿ ಲಿಂಗಶೆಟ್ಟಿ, ರಾಜ್ಯದ ಕೆಲವು ಕಡೆಗಳಲ್ಲಿ ಕಡಿಮೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವದು ಕಂಡು ಬಂದಿದೆ. ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಆಹಾರ ನೀಡುವ ಸರಕಾರದ ಉದ್ದೇಶ ಇಲ್ಲಿ ಸರಿಯಾಗಿ ಈಡೇರಿಲ್ಲ. ಅಧಿಕಾರಿಗಳು ಒಳ್ಳೆಯ ಗುಣಮಟ್ಟದ ಆಹಾರ ಪೂರೈಕೆಯ ಬಗ್ಗೆ ಕಾಳಜಿವಹಿಸಿ ಮಕ್ಕಳಿಗೆ ಮತ್ತು ತಾಯಂದಿರಿಗೆ ಪೌಷ್ಟಿಕಾಂಶ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮುಖ್ಯಮಂತ್ರಿಗಳು ಈ ಕುರಿತಂತೆ ವಿಶೇಷ ಗಮನ ಹರಿಸಿ ಉತ್ತಮ ಆಹಾರ ಪೂರೈಸಲು ಕ್ರಮ ವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಶೋಕರಾಜ್ ಶಿರಹಟ್ಟಿ, ಸಾವಿತ್ರಿ ಕುರಿ, ಪುಷ್ಪಾ ಅಣ್ಣಿಗೇರಿ, ಬೀರಪ್ಪ ಪೂಜಾರ, ಶಿವಣ್ಣ ಗಿಡಿಬಿಡಿ, ಎಂ.ಎಂ. ಕಂಡೋಜಿ, ಮಂಜುನಾಥ್ ಚಂದರಗಿ, ಬಸವರಾಜ್ ಗಿಡಿಬಿಡಿ, ಮಂಜುನಾಥ್ ಮಲ್ಲೂರ, ರಾಜು ಹಾದಿಮನಿ, ಕಾರ್ಯಕರ್ತರು ಇದ್ದರು. ತಹಸೀಲ್ದಾರ ವಾಸುದೇವಸ್ವಾಮಿ ಮನವಿ ಸ್ವೀಕರಿಸಿದರು.