ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ, ರಾಜ್ಯ ಸರ್ಕಾರದ ನಿಶ್ಚಿತ ಮಾಸಿಕ ಗೌರವಧನ ಹಾಗೂ ಪ್ರಣಾಳಿಕೆಯ ಭರವಸೆಯ ಮೊತ್ತ ಒಟ್ಟುಗೂಡಿಸಿ 15 ಸಾವಿರ ರೂ ಮಾಸಿಕ ನಿಶ್ಚಿತ ಗೌರವಧನ ನೀಡಬೇಕು ಎನ್ನುವ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಬೇಕೆಂದು ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿಯವರಿಗೆ ಗುರುವಾರ ತಾಲೂಕಿನ ಆಶಾ ಕಾರ್ಯಕರ್ತೆಯರು ಮನವಿ ಅರ್ಪಿಸಿದರು.
ರಾಜ್ಯ ಸರ್ಕಾರ ಈಗ ನೀಡುತ್ತಿರುವ ರೂ.5000 ಮಾಸಿಕ ನಿಶ್ಚಿತ ಗೌರವಧನ ಮತ್ತು ವಿವಿಧ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ರೂ.7000 ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಪ್ರತಿಷ್ಠೆಯ ಐದು ಗ್ಯಾರಂಟಿಗಳ ಜೊತೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆಯ ನೀಡಿರುವ ರೂ.3000 ಗಳನ್ನು ಒಟ್ಟುಗೂಡಿಸಿ ಮಾಸಿಕ ರೂ.15.000 ಗೌರವಧನ ನಿಗದಿ ಮಾಡಬೇಕು ಎನ್ನುವ ಬೇಡಿಕೆ ಈಡೇರಿಲ್ಲ. ಅಧಿವೇಶನದಲ್ಲಿ ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವಂತೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಶಾಸಕ ಡಾ. ಚಂದ್ರು ಲಮಾಣಿ, ಆಶಾಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸದನದಲ್ಲಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿ ಸದನದಲ್ಲಿ ಈ ಬಗ್ಗೆ ಸರಕಾರದ ಗಮನ ಸೆಳೆಯುವ ಕಾರ್ಯವನ್ನು ಮಾಡುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸುಂದ್ರಮ್ಮ ಪಾಟೀಲ, ತಾಲೂಕಾಧ್ಯಕ್ಷೆ ಸುಮಂಗಳಾ ತಳವಾರ, ಶಾರದಾ ಬಡಿಗೇರ, ಕವiಲಾ ಲಮಾಣಿ, ಮಾಮಕ್ಕ ಬನ್ನಿಮಟ್ಟಿ, ಪುಷ್ಪಾ ಹವಳದ, ಪ್ರತಿಮಾ ಮೂರ್ಖಂಡಿ, ಶಾಂತವೀರಮ್ಮ ಬಿಳಗೆ, ಚನ್ನವ್ವ ಕಾರಬಾರಿ, ಜಯಶ್ರೀ ಕಾರಬಾರಿ, ವನಜಾ ಡಂಬಳ, ಸುಧಾ ಮಂಜಲಾಪೂರ, ರುಕ್ಮಿಣಿ ವಂದಾಲ, ಸುಧಾ ನರಸಮ್ಮನವರ, ಜಯವ್ವ ಆನೆಪ್ಪನವರ, ರೂಪಾ ನಾಯಕ, ಶಿವಲೀಲಾ ಕೋಟಿಹಾಳಮಠ ಸೇರಿದಂತೆ ಅನೇಕರಿದ್ದರು.