ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು, ಅವರನ್ನು ಪುನಃ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಇಲ್ಲವಾದರೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಗುತ್ತಿಗೆ ಪೌರಕಾರ್ಮಿಕರು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪುರಸಭೆಯಲ್ಲಿ ಕಳೆದ ಮಾರ್ಚ್ನಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಾಲ್ಕು ತಿಂಗಳು ಕಾರ್ಯನಿರ್ವಹಿಸಿದ ನಂತರ ಅದರಲ್ಲಿ ಗುತ್ತಿಗೆದಾರರ 2 ತಿಂಗಳ ಗೌರವಧನ ಕೊಟ್ಟು ಇನ್ನೂ 2 ತಿಂಗಳು ಗೌರವಧನ ಕೊಟ್ಟಿಲ್ಲ. ಕಸ ವಿಲೇವಾರಿ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿನ ಯಂತ್ರಗಳು ದುರಸ್ತಿಗೆ ಬಂದಮೇಲೆ ಕೆಲಸದಿಂದ ತೆಗೆದುಹಾಕಲಾಗಿತ್ತು. ಈಗ ಮತ್ತೆ ಯಂತ್ರ ದುರಸ್ತಿಯಾದಾಗ 10 ಜನರಲ್ಲಿ 6 ಜನರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಂಡು 4 ಜನರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಸದರಿ 4 ಜನರ ಜಾಗಕ್ಕೆ ಬೇರೆಯವರನ್ನು ನೇಮಿಸಿಕೊಂಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದರು.
ಇದರಿಂದ ನಮಗೆ ಅನ್ಯಾಯವಾಗಿದ್ದು, ಇನ್ನು 2 ದಿನದಲ್ಲಿ ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ನಾವು ಪುರಸಭೆ ಎದುರು ಅಹೋರಾತ್ರಿ ಧರಣಿ ಕೂರಲಿದ್ದೇವೆ. ಪುನಃ ಕೆಲಸಕ್ಕೆ ತೆಗೆದುಕೊಂಡರೆ ಮಾತ್ರ ಉಳಿದವರು ಕೆಲಸಕ್ಕೆ ಹಾಜರಾಗುತ್ತೇವೆ. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರ ಮುಖಂಡ ಬಸವಣೆಪ್ಪ ನಂದೆಣ್ಣವರ, ನೀಲಪ್ಪ ಶಿರಹಟ್ಟಿ, ಪರಮೇಶ ಗಡದವರ, ಅರುಣ ನಂದೆಣ್ಣವರ, ರವಿ ಗಾಂಜಿ, ಕಲ್ಯಾಣಕುಮಾರ ಹಾದಿಮನಿ, ಅಜಿತ ನಂದೆಣ್ಣವರ, ರಾಮಪ್ಪ ಅಯ್ಯಣ್ಣವರ, ಪ್ರಕಾಶ ಗಡದವರ, ಹೊನ್ನಪ್ಪ ಮೆಗಲಮನಿ, ಮಂಜುನಾಥ ದೊಡ್ಡಮನಿ, ಯಲ್ಲಕ್ಕ ಗಡದವರ, ದುರ್ಗವ್ವ ಶಿರಹಟ್ಟಿ, ಕಮಲವ್ವ ನಂದೆಣ್ಣವರ, ಮಲ್ಲವ್ವ ಗಡದವರ, ಹನುಮವ್ವ ಗಡದವರ, ದ್ಯಾಮಕ್ಕ ನಂದೆಣ್ಣವರ, ಕರಿಯವ್ವ ದೊಡ್ಡಮನಿ ಮುಂತಾದವರಿದ್ದರು.



